ರಾಯ್ಪುರ್: ತಾನು ಪ್ರೀತಿಸಿದ ಹುಡಗಿ ಮದುವೆ ಮಾಡಿಕೊಳ್ಳಲು ಒಪ್ಪಿಲ್ಲವೆಂದು ಮನನೊಂದ ಯುವಕನೊಬ್ಬ ಆಕೆಗೆ ಚೂರು ಹಾಕಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡ ಭಯಾನಕ ಘಟನೆಯೊಂದು ಛತ್ತೀಸ್ಗಢದ ಕಂಕೇರಾ ಜಿಲ್ಲೆಯ ಬೈರನ್ಪೂರಿ ಗ್ರಾಮದಲ್ಲಿ ನಡೆದಿದೆ.
20 ವರ್ಷದ ಕಮಲ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ಯುವಕ.
ಏನಿದು ಪ್ರಕರಣ?: ಕಮಲ್ ಸಿಂಗ್ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಹೀಗಾಗಿ ಈ ವಿಚಾರವನ್ನು ಆತ ತನ್ನ ಅಕ್ಕ-ಬಾವನ ಜೊತೆ ಹೇಳಿಕೊಂಡಿದ್ದಾನೆ. ಅಂತೆಯೇ ಅಕ್ಕ-ಭಾವ ಯುವತಿಯ ಅಕ್ಕ-ಭಾವನ ಜೊತೆ ಮದುವೆಯ ಪ್ರಸ್ತಾಪ ಮಾಡಿದ್ದಾರೆ. ಆದ್ರೆ ಈ ಮದುವೆಯನ್ನು ಯುವತಿ ತಿರಸ್ಕರಿಸಿದ್ದಾಳೆ. ಹೀಗಾಗಿ ಒನ್ ವೇ ಲವ್ ಮಾಡುತ್ತಿದ್ದ ಕಮಲ್ ಸಿಂಗ್ ಆಕೆ ತನ್ನನ್ನು ತಿರಸ್ಕರಿಸಿದಳೆಂದು ಸಿಟ್ಟಾಗಿ ಹರಿತವಾದ ಚೂರಿಯಿಂದ ಆಕೆಗೆ ಇರಿದಿದ್ದಾನೆ. ಪರಿಣಾಮ ರಕ್ತದ ಮಡುವಿನಲ್ಲಿ ಬಿದ್ದ ಯುವತಿಯನ್ನು ಅಲ್ಲೇ ಬಿಟ್ಟು ಹೋಗಿದ್ದಾನೆ.
ಬಳಿಕ ಸ್ಥಳೀಯ ಮೊಬೈಲ್ ಟವರ್ ಗೆ ಆತ್ಮಹತ್ಯೆ ಮಾಡಿಕೊಳ್ಳಲೆಂದು ಏರಿದ್ದಾನೆ. ಇತ್ತ ಸ್ಥಳೀಯರು ತಮ್ಮ ಗಂಟಲು ಒಣಗುವಷ್ಟು ಪರಿಪರಿಯಾಗಿ ಬೇಡಿಕೊಂಡರೂ ಕಮಲ್ ಮಾತ್ರ ಟವರಿಂದ ಇಳಿಯಲೇ ಇಲ್ಲ. ಬದಲಾಗಿ 120 ಅಡಿ ಎತ್ತರದಿಂದ ಕೆಳಕ್ಕೆ ಧುಮುಕಿ ಪ್ರಾಣ ಬಿಟ್ಟಿದ್ದಾನೆ.
ಸದ್ಯ ಚಾಕು ಇರಿತದಿಂದ ಗಂಭೀರ ಗಾಯಗೊಂಡ ಯುವತಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ ಅಂತಾ ವರದಿಯಾಗಿದೆ.