ಹಾಸನ: ಜಿಲ್ಲೆಯ ಸಕಲೇಶಪುರ ವಿಭಾಗದ ಸಾರಿಗೆ ಬಸ್ ಚಾಲಕನ ಲವ್ ಕಹಾನಿಗೆ ಟ್ವಿಸ್ಟ್ ಸಿಕ್ಕಿದೆ. ತಾಲೂಕಿನ ಆದರಗೆರೆ-ದೊಡ್ಡನಹಳ್ಳಿಯ ಎಲ್ಎಲ್ಬಿ ವಿದ್ಯಾರ್ಥಿನಿ ತನುಶ್ರೀ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಸಾರಿಗೆ ಬಸ್ ಚಾಲಕ ಸಂತೋಷ್ ಕಾರಣ ಎಂದು ಆರೋಪಿಸಲಾಗಿತ್ತು.
ತನುಶ್ರೀ ಪೋಷಕರು ನಮ್ಮ ಮಗಳ ಸಾವಿಗೆ ಸಂತೋಷನೇ ಕಾರಣ. ಆತ ನನ್ನನ್ನು ಪ್ರೀತಿಸು, ಮದುವೆಯಾಗು ಎಂದು ತಮ್ಮ ಮಗಳಿಗೆ ಬಲವಂತ ಮಾಡುತ್ತಿದ್ದನು. ಆತನ ಕಿರುಕುಳದಿಂದಲೇ ಮಗಳು ವಿಷ ಕುಡಿದು ಸತ್ತಿದ್ದಾಳೆ ಎಂದು ದೂರಿದ್ದರು. ಮೃತ ತನುಶ್ರೀ ಸಹ ಸಾಯುವ ಮುನ್ನ ಸಂತೋಷನ ವಿರುದ್ಧ ಹೇಳಿಕೆ ನೀಡಿದ್ದಳು.
ಏನದು ಟ್ವಿಸ್ಟ್?: ಸಂತೋಷನ ಒನ್ ವೇ ಲವ್ ಅಲ್ಲ ಅಥವಾ ಬಲವಂತ ಸಹ ಮಾಡಿಲ್ಲ. ಬದಲಾಗಿ ತನುಶ್ರೀಯೂ ಸಹ ಸಂತೋಷನನ್ನು ಅತಿಯಾಗಿ ಪ್ರೀತಿಸಿದ್ದಳು. ಮಾನಸಿಕವಾಗಿ ಪತಿ ಅಂತಲೇ ಸ್ವೀಕಾರ ಮಾಡಿದ್ದಳು. ನೀನು ನಮ್ಮ ಮನೆಯವರಿಗೆ ಫೋನ್ ಮಾಡಿ ನನ್ನನ್ನು ಮದುವೆ ಮಾಡಿಕೊಡುವಂತೆ ಕೇಳು ಎಂದು ಹೇಳಿದ್ದ ನಿಜ ಸಂಗತಿ ಆಕೆ ಸಂತೋಷ್ಗೆ ಮಾಡಿರುವ ಮೆಸೇಜ್ಗಳಿಂದ ಬಯಲಾಗಿದೆ.
2 ವರ್ಷಗಳಿಂದ ಸಂತೋಷ್ ಮತ್ತು ತನುಶ್ರೀ ಪರಸ್ಪರ ಪ್ರೀತಿಸಿ ಮದುವೆಯಾಗಲೂ ನಿರ್ಧರಿಸಿದ್ದರು. ಇದಕ್ಕೆ ಸಂತೋಷ್ ಮನೆಯವರು ಒಪ್ಪಿದ್ದರೆ, ತನುಶ್ರೀ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಯುವತಿ ತಂದೆ ಸುದೇಶ್ ಲವ್ ಕಾರಣಕ್ಕೆ ಮಗಳನ್ನು ನಿಂದಿಸಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ತನುಶ್ರೀ, ತಾನೇ ಸಂತೋಷನಿಗೆ ಮೆಸೇಜ್ ಮಾಡಿ ನಮ್ಮ ಮದುವೆ ಸಾಧ್ಯವಾಗದೇ ಇದ್ರೆ ಸಾಯೋಣ ಎಂದು ನಿರ್ಧರಿಸಿ ಕಳೆದ ಆಗಸ್ಟ್ 3 ರಂದು ಪ್ರತ್ಯೇಕವಾಗಿ ವಿಷ ಕುಡಿದಿದ್ದಾರೆ.
ಸದ್ಯ ಸಂತೋಷ್ ಬದುಕುಳಿದಿದ್ದರೆ, ತನುಶ್ರೀ ಸಾವನ್ನಪ್ಪಿದ್ದಾಳೆ. ತನುಶ್ರೀ ಸಾವಿಗೆ ನಮ್ಮ ಮಗ ಕಾರಣ ಅಲ್ಲ, ಬದಲಾಗಿ ಆಕೆಯ ತಂದೆಯೇ ನೇರ ಹೊಣೆ. ನಮ್ಮ ಮಗ ಮತ್ತು ತನುಶ್ರೀ ಕೋರಿಕೆಯಂತೆ ನಾವೇ ದೂರವಾಣಿ ಕರೆ ಮಾಡಿ ತನುಶ್ರೀಯನ್ನು ಮಗನಿಗೆ ಮದುವೆ ಮಾಡಿಕೊಡುವಂತೆ ಕೇಳಿದ್ದೆವು.
ಆದರೆ ಅದಕ್ಕೆ ಅವರು ಒಪ್ಪಲಿಲ್ಲ. ಇದೇ ಕಾರಣಕ್ಕೆ ತನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಂತೋಷ್ ಪೋಷಕರು ಆರೋಪ ಮಾಡಿದ್ದಾರೆ. ಇದರಿಂದಾಗಿ ತಂದೆಯ ಪ್ರತಿಷ್ಠೆಯೇ ತನುಶ್ರೀ ಸಾವಿಗೆ ಕಾರಣವಾಯಿತೇ ಎಂಬ ಬಲವಾದ ಅನುಮಾನ ಮೂಡಿದೆ. ಆದರೂ ತನುಶ್ರೀ ತಂದೆ, ಮಗಳ ಸಾವಿಗೆ ಸಂತೋಷನೇ ಕಾರಣ, ಆತನನ್ನು ಬಂಧಿಸಿ ಶಿಕ್ಷಿಸಬೇಕು ಎಂದು ಮತ್ತೆ ಮನವಿ ಮಾಡಿದ್ದಾರೆ.