ತುಮಕೂರು: ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡು ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ಸೊಗಡು ಶಿವಣ್ಣ ಕೊನೆಗೂ ಮೌನ ಮುರಿದಿದ್ದಾರೆ. ಟಿಕೆಟ್ ಸಿಗದ ಬಳಿಕ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದೇ ಶಿವಣ್ಣ ದೂರ ಉಳಿದಿದ್ರು.
ಇಂದು ಸುದ್ದಿಗೋಷ್ಠಿ ಕರೆದು ಮಾತನಾಡಿದ ಸೊಗಡು ಶಿವಣ್ಣ, ಯಾವ ನಾಯಕರೂ ನನ್ನ ಮನವೊಲಿಸುವ ಪ್ರಯತ್ನ ಮಾಡೋದು ಬೇಡ. ಸದ್ಯ ನಾನು ತಟಸ್ಥನಾಗಿರುತ್ತೇನೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ದಯವಿಟ್ಟು ನನ್ನ ಮನೆಗೆ ಬರುವುದು ಬೇಡ. ಚುನಾವಣೆ ಮುಗಿದ ಬಳಿಕ ನಾನೇ ಅವರ ಮನೆಗೆ ಹೋಗಿ ಮಾತಾಡುತ್ತೇನೆ ಎಂದು ಕೈ ಮುಗಿದು ಕೇಳಿಕೊಂಡರು.
ಈ ಬಾರಿಯ ಚುನಾವಣೆಯಲ್ಲಿ ತಟಸ್ಥವಾಗಿರಲು ನಿರ್ಧರಿಸಿದ್ದೇನೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಲ್ಲಿ ಸಕ್ರಿಯನಾಗುತ್ತೇನೆ. ಮಾಜಿ ಸಂಸದ ಜಿ.ಎಸ್.ಬಸವರಾಜು ಹಾಗೂ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಕೊಟ್ಟಿರುವ ಹಿಂಸೆಗೆ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಿತ್ತು. ಆದ್ರೆ ಧೈರ್ಯದಿಂದ ಧೃತಿಗೆಡದೇ ಪರಿಸ್ಥಿತಿ ಎದುರಿಸಿದ್ದೇನೆ ಎಂದು ಮಾಜಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಸೊಗಡು ಶಿವಣ್ಣ ಈ ಬಾರಿ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಹೈಕಮಾಂಡ್ ಜ್ಯೋತಿ ಗಣೇಶ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದರಿಂದ ಸೊಗಡು ಶಿವಣ್ಣ ಸಹಜವಾಗಿಯೆ ಅಸಮಾಧಾನಗೊಂಡಿದ್ರು.