ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಸೇರುವ ಬಗ್ಗೆ ಈಗಾಗಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ `ಉತ್ತಮ ವ್ಯಕ್ತಿಗಳು ಬಿಜೆಪಿಗೆ ಸೇರಲು ಮನಸ್ಸು ಮಾಡಿದರೆ ಅವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆ ಅಂತಾ ಹೇಳಿದ್ದಾರೆ.
ಒಂದು ವೇಳೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬಿಜೆಪಿ ಪಕ್ಷ ಸೇರಲು ಇಚ್ಛಿಸಿದ್ದಲ್ಲಿ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬಳಿಕ ಅಮಿತ್ ಷಾ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನಿಯವರನ್ನು ಭೇಟಿ ಮಾಡುತ್ತಾರೆ ಅನ್ನೋ ಮಾತನ್ನ ಅಲ್ಲಗೆಳೆದು, ಪ್ರಧಾನಿಯವರನ್ನು ಹಲವಾರು ಮಂದಿ ಭೇಟಿಯಾಗ್ತಾರೆ ಅಂತಾ ಹೇಳಿದ್ದಾರೆ.
ಕಳೆದ ವಾರವಷ್ಟೇ ರಜನಿಕಾಂತ್, `ರಾಜಕೀಯದತ್ತ ಮುಖಮಾಡುವುದು ದೇವರ ಇಚ್ಚೆ ಅಂತಾ ಹೇಳಿಕೆ ನೀಡಿದ್ದರು. ಆ ಬಳಿಕ 9 ವರ್ಷಗಳ ನಂತ್ರ ತನ್ನ ಅಭಿಮಾನಿಗಳ ಜೊತೆ ಸಂವಾದ ನಡೆಸಿ, ನಾನು ತಮಿಳಿಗ ನಾನು ಎಲ್ಲೂ ಹೋಗಲ್ಲ. ನನ್ನನ್ನ ತಮಿಳಿಗನಾಗಿ ಮಾಡಿದ ನಿಮಗೆಲ್ಲರಿಗೂ ಧನ್ಯವಾದ ಅಂತಾ ಹೇಳಿದ್ದರು. ಈ ಮೂಲಕ ರಜನಿ ತಮಿಳಿನಾಡಿನಲ್ಲಿದ್ದೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು.
ಇಂತಹ ಊಹಾಪೋಹಗಳಿಂದಾಗಿ ತಮಿಳಿನಾಡಿನಲ್ಲಿ ಕನ್ನಡಿಗ ರಜನಿಕಾಂತ್ ರಾಜಕೀಯದಿಂದ ದೂರ ಉಳಿಯಬೇಕೆಂದು ತಮಿಳು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೆಲ ಬಿಜೆಪಿ ನಾಯಕರು ರಜನಿಕಾಂತ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.
ರಜನೀಕಾಂತ್ ಒಬ್ಬ ಪ್ರಖ್ಯಾತ ನಟ. ಹಾಗೆಯೇ ರಾಜಕೀಯದಲ್ಲಿ ಪ್ರಧಾನಿಯವರು ಉತ್ತಮ ಮುಖಂಡ. ಹೀಗಾಗಿ ರಜನಿಕಾಂತ್ ಪ್ರಧಾನಿಯವರನ್ನು ಭೇಟಿಯಾಗಲು ಇಚ್ಛಿಸಿದ್ದಲ್ಲಿ, ಯಾವುದೇ ಸಮಸ್ಯೆಗಳಿಲ್ಲದೇ ಭೆಟಿಯಾಗಬಹುದು ಅಂತಾ ಸಚಿವ ವೆಂಕಯ್ಯ ನಾಯ್ಡು ಕಳೆದ ಭಾನುವಾರ ಬೆಂಗಳೂರಿನಲ್ಲಿ ಕೇಳಿಕೆ ನೀಡಿದ್ದರು.