ಹುಬ್ಬಳ್ಳಿ: ಗಂಡನ ಬೈಕ್ ಕಳ್ಳತನವಾಗಿದ್ದಕ್ಕೆ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ.
ಶಶಿಕಲಾ ಕಮ್ಮಾರ (28) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಶಶಿಕಲಾ ಪತಿ ಮಂಜುನಾಥ್ ಸೋಮವಾರ ಸಾಲ ಮಾಡಿ ಹೊಸ ಬೈಕ್ ಖರೀದಿ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಸೋಮವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಥಳಿಸಿ ಬೈಕ್ ಕದ್ದು ಪರಾರಿಯಾಗಿದ್ದರು.
ಈ ಘಟನೆಯಿಂದ ಮನನೊಂದ ಪತ್ನಿ ಶಶಿಕಲಾ ಸಾಲಮಾಡಿ ತಂದ ಬೈಕ್ ಕಳ್ಳತನವಾಯಿತಲ್ಲ ಎಂದು ನೊಂದುಕೊಂಡಿದ್ದರು. ಬೈಕ್ ಕಳ್ಳತನವಾಗಿದೆ ಎಂದು ಪತಿ ಪೊಲೀಸರಿಗೆ ದೂರು ನೀಡಲು ಹೋದಾಗ ಮನೆಯಲ್ಲಿ ಪತ್ನಿ ಶಶಿಕಲಾ ನೇಣಿಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.
ಬೈಕ್ ಕಳೆದುಕೊಂಡ ಚಿಂತೆ ಒಂದೆಡೆಯಾದ್ರೆ, ಪತ್ನಿ ಆತ್ಮಹತ್ಯೆ ಮಾಡಿಕೊಂಡಳಲ್ಲ ಎಂಬ ದುಖಃದಲ್ಲಿ ಪತಿ ಮಂಜುನಾಥ್ ಅವರದ್ದಾಗಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.