ರಾಯಚೂರು: ಪತಿಯ ಕಿರುಕುಳಕ್ಕೆ ಬೇಸತ್ತು ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ರಾಯಚೂರಿನ ಎಗ್ಗಸನಹಳ್ಳಿಯಲ್ಲಿ ನಡೆದಿದೆ. ಇದೇ ವೇಳೆ ರಕ್ಷಣೆಗೆ ಬಂದ ಪತಿ ಹಾಗೂ ಮಗ ಸೇರಿ ಮೂವರಿಗೆ ಗಂಭೀರ ಗಾಯಗಳಾಗಿವೆ.
ಜಮಲಮ್ಮ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಜಮಲಮ್ಮ ಅವರಿಗೆ ಪತಿ ಮಾಜಿ ನಕ್ಸಲ್ ಜಿಂದಪ್ಪ ಪತ್ನಿ ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಪ್ರತಿದಿನ ದೈಹಿಕ ಹಿಂಸೆ ನೀಡುತ್ತಿದ್ದರು. ಇದರಿಂದ ಬೇಸತ್ತ ಜಮಲಮ್ಮ ಪತಿಯ ಎದುರೇ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಜಮಲಮ್ಮ ಅವರು ಮಾಜಿ ಗ್ರಾಮ ಪಂಚಾಯಿತಿ ಸದಸ್ಯೆಯಾಗಿದ್ದರು.
ಬೆಂಕಿಯ ಜ್ವಾಲೆಯಿಂದ ಉರಿಯುತ್ತಿದ್ದ ಜಮಲಮ್ಮ ಪತಿ ಜಿಂದಪ್ಪರನ್ನು ಬಿಗಿಯಾಗಿ ಹಿಡಿದಿದ್ದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿವೆ. ಪಕ್ಕದ ಮನೆಯಲ್ಲಿದ್ದ ಮಗ ಭಾಸ್ಕರ್ ಸ್ಥಳಕ್ಕೆ ಧಾವಿಸಿ ತಂದೆ ತಾಯಿಯನ್ನ ಉಳಿಸುವ ಪ್ರಯತ್ನದಲ್ಲಿ ಅವ್ರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮಲಮ್ಮ ಅವರಿಗೆ ಶೇಕಡ 90ರಷ್ಟು ಭಾಗ ಸುಟ್ಟಗಾಯಗಳಾಗಿದ್ದು, ಜಿಂದಪ್ಪನವರು ಸ್ಥಿತಿಯೂ ಗಂಭೀರವಾಗಿದೆ. ಮೂರು ಜನ ಗಾಯಾಳುಗಳನ್ನೂ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.