ಹಾಸನ: ಜಮೀನು ವಿವಾದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಮಹಿಳೆಯೊಬ್ಬರ ಸೀರೆ ಬಿಚ್ಚಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೊಡ್ಡ ಕುಂಚೇವು ಗ್ರಾಮದಲ್ಲಿ ಶುಕ್ರವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ರಾಜಮ್ಮ ಹಲ್ಲೆಗೊಳಗಾದ ಮಹಿಳೆ. ಗ್ರಾಮದ ಮಂಜೇಗೌಡ ಎಂಬವರು ಮಹಿಳೆಯರನ್ನು ಕರೆದುಕೊಂಡು ಬಂದು ಹಲ್ಲೆ ಮಾಡಿಸಿದ್ದಾರೆ ಎಂದು ರಾಜಮ್ಮ ಆರೋಪಿಸುತ್ತಿದ್ದಾರೆ.
ರಾಜಮ್ಮ ಮತ್ತು ಪ್ರಮೀಳಾ ಕುಮಾರಿ ಎಂಬವರ ನಡುವೆ ಜಮೀನು ವಿವಾದ ಹಿನ್ನೆಲೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿತ್ತು. ಏಪ್ರಿಲ್ ನಲ್ಲಿ ನ್ಯಾಯಾಲಯದ ತೀರ್ಪು ಸಹ ಪ್ರಕಟವಾಗಿತ್ತು. ನ್ಯಾಯಾಲಯದ ತೀರ್ಪಿನ ಪ್ರಕಾರ ಪ್ರಮೀಳಾ ಕುಮಾರಿಗೆ 3 ಎಕೆರೆ 37 ಗುಂಟೆ ಜಮೀನು ನೀಡಲಾಗಿತ್ತು. ಆದರೆ ಪ್ರಮೀಳಾ ಉಳಿದ ಜಮೀನಿಗಾಗಿ ಗಲಾಟೆ ನಡೆಸುತ್ತಿದ್ದರು.
ಶುಕ್ರವಾರ ಜಮೀನಿನಲ್ಲಿ ಇಬ್ಬರ ನಡುವೆ ಸಂಧಾನ ನಡೆಸಲು ರೈತ ಮುಖಂಡ ಎನ್ನಲಾದ ಮಂಜೇಗೌಡ ಎಂಬವರು ತಮ್ಮ ಸಹಚರರೊಂದಿಗೆ ಆಗಮಿಸಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ರೈತ ಸಂಘದ ಕಾರ್ಯಕರ್ತೆ ರಾಜಮ್ಮ ಅವರ ಸೀರೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ.
ಸ್ಥಳದಲ್ಲಿ ರೈತ ಸಂಘದ ಸದಸ್ಯರು, ಪೊಲೀಸರು ಮತ್ತು ಸ್ಥಳೀಯರಿದ್ರೂ ಯಾರು ನನ್ನ ಸಹಾಯಕ್ಕೆ ಬರಲಿಲ್ಲ ಎಂದು ರಾಜಮ್ಮ ಆರೋಪಿಸಿದ್ದಾರೆ. ಈ ಸಂಬಂಧ ಹೊಳೇನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.