ಚಿಕ್ಕಬಳ್ಳಾಪುರ: ಮಂತ್ರ ಘೋಷಗಳೊಂದಿಗೆ ಕಲ್ಯಾಣ ಮಂಟಪದಲ್ಲಿ ಸಂಪ್ರದಾಯಬದ್ಧವಾಗಿ ವಿವಾಹವಾಗಿದ್ದ ಮಹಿಳೆಯೊಬ್ಬರು ತಮ್ಮ ಮೊದಲ ಪತಿ ಎದುರೇ ಮತ್ತೊಬ್ಬ ಪುರುಷನೊಂದಿಗೆ ಮದುವೆ ಮಾಡಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಅಶ್ವಿನಿ ಬಡಾವಣೆಯ ನಿವಾಸಿಯಾದ ವಕೀಲೆ ಹಾಗೂ ರಾಜ್ಯ ರೈತ ಸಂಘದ ಮಹಿಳಾ ರಾಜ್ಯಾಧ್ಯಕ್ಷೆ ಎಸ್.ರಚನಾ ತಾಲೂಕಿನ ಪೆದ್ದೂರು ಗ್ರಾಮದ ಈಶ್ವರಗೌಡರವರನ್ನು ಹದಿನೈದು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದ್ರೆ ಈಶ್ವರಗೌಡರಿಗೆ ವಿಚ್ಛೇದನ ನೀಡಿದ್ದು, ಇದೀಗ ರಚನಾ ಅವರು ನಡೆಸುತ್ತಿದ್ದ ರಚನಾ ಕ್ರಿಯೇಟಿವ್ ಖಾಸಗಿ ಶಾಲೆಯ ವ್ಯಾನ್ ಚಾಲಕ ಮಂಜುನಾಥ್ ಎಂಬವರನ್ನು ಗಂಡನ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.
ಮನೆಯ ದೇವರಗುಡಿಯ ಮುಂದೆ ಮಂಜುನಾಥ್ ರಚನಾಗೆ ತಾಳಿ ಕಟ್ಟಿ, ಹಾರ ಬದಲಾಯಿಸಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತನ್ನ ಮಾಜಿ ಹೆಂಡತಿಯ ಮದುವೆ ಸಂದರ್ಭದಲ್ಲಿ ಈಶ್ವರಗೌಡ ಕೂಡ ಅವರಿಬ್ಬರ ಜೊತೆ ನಿಂತು ಫೋಟೋ ವಿಡಿಯೋಗೆ ಪೋಸ್ ಕೊಟ್ಟಿದ್ದಾರೆ.
ರಚನಾ ಹಾಗೂ ಈಶ್ವರಗೌಡರಿಗೆ ಒಂದು ಹೆಣ್ಣು ಹಾಗೂ ಒಂದು ಗಂಡು ಮಗ ಕೂಡ ಇದ್ರು. ಆದರೆ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದೇ ಅವರಿಬ್ಬರು 2016ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಚ್ಛೇದನ ಪಡೆದಿದ್ದರು.
ರಚನಾರನ್ನ ಮದುವೆಯಾದ ಮಂಜುನಾಥ್ಗೆ ಕೆಲವರು ಗೂಸಾ ಕೊಟ್ಟಿದ್ದು ಈ ಬಗ್ಗೆ ನಗರ ಠಾಣೆಯ ಮೆಟ್ಟಲೇರಿದ್ದರು. ನಂತರ ಠಾಣೆಯಲ್ಲಿ ರಾಜಿ ಪಂಚಾಯತಿ ಮೂಲಕ ಸಮಸ್ಯೆ ಬಗೆಹರಿದಿದೆ. ಮರುಮದುವೆಯಾಗಿರುವ ವಕೀಲೆ ರಚನಾ ತಾನು ವಿಚ್ಛೇದನ ಪಡೆದಿದ್ದು ನನ್ನ ಜೀವನದ ಮುಂದಿನ ಹಾದಿಗೆ ಮತ್ತು ನನ್ನನ್ನು ಇಷ್ಟಪಡುವವರನ್ನು ಮದುವೆಯಾಗಿದ್ದೇನೆ ಎಂದು ಹೇಳಿದ್ದಾರೆ.