ಬಳ್ಳಾರಿ: ಪ್ರಯಾಣದ ಸಂದರ್ಭದಲ್ಲಿ ಮಾರ್ಗಮಧ್ಯೆ ವೃದ್ಧ ಮಹಿಳೆಯೊಬ್ಬರು ಕೆಎಸ್ಆರ್ಟಿಸಿ ಬಸ್ನಲ್ಲಿಯೇ ಜೀವ ಬಿಟ್ಟಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿ ನಡೆದಿದೆ.
ಮೂಲತಃ ಕುರುಗೋಡಿನ ಇಂದಿರಾನಗರದ ನಿವಾಸಿಯಾದ ದೊಡ್ಡ ಬಸಪ್ಪ ಎಂಬುವರ ಪತ್ನಿ ನೀಲಮ್ಮ (61) ಮೃತಪಟ್ಟಿರುವ ವೃದ್ಧ ಮಹಿಳೆ. ಇವರು ಗಂಗಾವತಿಯಿಂದ ಕುರುಗೋಡಿಗೆ ಪ್ರಯಾಣಿಸುವಾಗ ಕಂಪ್ಲಿ ರಸ್ತೆಯ ಮಧ್ಯದಲ್ಲಿ ಜೀವ ಬಿಟ್ಟಿದ್ದಾರೆ.
ನೀಲಮ್ಮ ಅವರು ಗಂಗಾವತಿಯಲ್ಲಿರುವ ಅವರ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿದ್ದರು. ನಂತರ ಸಂಬಂಧಿಕರೇ ಬಸ್ ನಲ್ಲಿ ಕೂರಿಸಿ ಹೋಗಿದ್ದಾರೆ. ನಂತರ ಬಳ್ಳಾರಿಗೆ ಬರುತ್ತಿದ್ದ ಬಸ್ ಕಂಪ್ಲಿ ಮಾರ್ಗ ಬರುತ್ತಿದ್ದಂತೆ ಮೃತಪಟ್ಟಿದ್ದಾರೆ.
ಮೃತದೇಹ ನೋಡಿ ಪ್ರಯಾಣಿಕರು ಬಸ್ಸಿನಿಂದ ಕೆಳಗಡೆ ಇಳಿದಿದ್ದಾರೆ. ನಂತರ ಬಸ್ ಚಾಲಕ ನಿರ್ವಾಹಕರು ಕಂಪ್ಲಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ಬಂದು ಸರ್ಕಾರಿ ಆಸ್ಪತ್ರೆಗೆ ಮೃತದೇಹವನ್ನು ಕೊಂಡೊಯ್ದಿದ್ದಾರೆ.