ಹೈದರಾಬಾದ್: ಬಾಲಿವುಡ್ ನ `ಪದ್ಮಾವತಿ’ ಸಿನಿಮಾ ಯಾವ ಚಿತ್ರಮಂದಿರಗಳಲ್ಲಿ ತೆರೆಕಾಣುವುದೋ ಅಲ್ಲಿ ಬೆಂಕಿ ಹಚ್ಚುತ್ತೇವೆ ಎಂದು ಬಿಜೆಪಿ ಎಂಎಲ್ಎ ಟಿ.ರಾಜಾ ಸಿಂಗ್ ಸಿಕಂದರಾಬಾದ್ ನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.
ಪ್ರತಿಯೊಬ್ಬ ರಜಪೂತ ವ್ಯಕ್ತಿ ಪದ್ಮಾವತಿ ಸಿನಿಮಾವನ್ನು ವಿರೋಧ ಮಾಡುತ್ತಿದ್ದಾರೆ. ಒಂದು ವೇಳೆ ಸಿನಿಮಾ ಬಿಡುಗಡೆಯಾದರೆ ಚಿತ್ರದಲ್ಲಿನ ಅಂಶಗಳಿಂದ ರಜಪೂತ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ. ಈಗಾಗಲೇ ಗುಜರಾತಿನಲ್ಲಿ ಕ್ಷತ್ರೀಯ ಹಾಗು ರಜಪೂತ ಸಮುದಾಯದ ಮುಖಂಡರು ಚಿತ್ರ ಬಿಡುಗಡೆಗೂ ಮುನ್ನ ಖಾಸಗಿಯಾಗಿ ತೋರಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯನ್ನು ನೀಡಿಲ್ಲ. ಹಾಗಾಗಿ ತೆಲಂಗಾಣ ರಾಜ್ಯದಲ್ಲಿ ಸಿನಿಮಾ ಪ್ರದರ್ಶನಕ್ಕೆ ನಮ್ಮ ವಿರೋಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಿತ್ರದ ನಿರ್ದೇಶಕರು ರಜಪೂತ ಮಹಿಳೆಯರಿಗೆ ಅಗೌರವ ತೋರಿಸುವ ಮೂಲಕ ಹಣ ಸಂಪಾದನೆಯಲ್ಲಿ ತೊಡಗಿಕೊಂಡಿದ್ದಾರೆ. ಸಿನಿಮಾದಲ್ಲಿ ಭಾರತೀಯ ಇತಿಹಾಸವನ್ನು ಸಂಪೂರ್ಣವಾಗಿ ತಿರುಚಲಾಗಿದ್ದು, ಇದರಿಂದಾಗಿ ಭಾರತೀಯ ಹಿಂದೂ ಸಂಸ್ಕೃತಿಗೆ ಧಕ್ಕೆ ತರಲಾಗುತ್ತಿದೆ. ಚಿತ್ರ ಬಿಡುಗಡೆಗೆ ಭಯವಿದ್ದ ಕಾರಣ ಬನ್ಸಾಲಿ ಈ ಮೊದಲೇ ತಮ್ಮ ಸಿನಿಮಾ ಮೇಲೆ ವಿಮೆ ಮಾಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಪದ್ಮಾವತಿ ರಂಗೋಲಿ ವಿವಾದ- 48 ಗಂಟೆ ಸಮಯದಲ್ಲಿ ಬಿಡಿಸಿದ್ದ ರಂಗೋಲಿಯನ್ನು ಅಳಿಸಿದ್ದ ಆರೋಪಿಗಳ ಅರೆಸ್ಟ್
ಏನಿದು ವಿವಾದ?: ಪದ್ಮಾವತಿ ಸಿನಿಮಾ ಸೆಟ್ಟೇರಿದಾಗಿನಿಂದಲೂ ವಿವಾದವು ಹುಟ್ಟಿಕೊಂಡಿದೆ. ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿ ಮಾತ್ರ ಪದ್ಮಾವತಿ ನಡುವೆ ರೊಮ್ಯಾಂಟಿಕ್ ಸೀನ್ ಗಳಿವೆ. ಇನ್ನೂ ಸಿನಿಮಾದಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಸಿನಿಮಾದಲ್ಲಿ ಯಾವುದೇ ರೀತಿ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಸೀನ್ ಗಳಿಲ್ಲ ಎಂದು ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸ್ಪಷ್ಟನೆ ನೀಡಿದ್ದಾರೆ.
ಸಿನಿಮಾದಲ್ಲಿ ಪದ್ಮಾವತಿಯಾಗಿ ದೀಪಿಕಾ ಪಡುಕೋಣೆ ಎಲ್ಲರನ್ನು ಸೆಳೆಯಲಿದ್ದಾರೆ. ಅಲ್ಲಾವುದ್ದೀನ್ ಖಿಲ್ಜಿ ಪಾತ್ರದಲ್ಲಿ ರಣ್ವೀರ್ ಸಿಂಗ್ ಮತ್ತು ರಾವಲ್ ರತನ್ ಸಿಂಗ್ ಪಾತ್ರದಲ್ಲಿ ಶಾಹಿದ್ ಕಪೂರ್ ನಟಿಸಿದ್ದಾರೆ. ಪದ್ಮಾವತಿ ಡಿಸೆಂಬರ್ 1ರಂದು ದೇಶಾದ್ಯಂತ ತೆರೆಕಾಣಲಿದೆ.
ಇದನ್ನೂ ಓದಿ: ಪದ್ಮಾವತಿ ಸಿನಿಮಾ ಬ್ಯಾನ್ ಮಾಡೋದು ಸೂಕ್ತ ಎಂದ ಬಿಜೆಪಿ