ಮಂಡ್ಯ: ಸಕ್ಕರೆ ನಾಡಲ್ಲಿ ಕಾಡಾನೆಗಳ ಅಬ್ಬರ ಶುರವಾಗಿದ್ದು, ಸುಮಾರು ಆರು ಆನೆಗಳು ಕಾಡಿನಿಂದ ನಾಡಿಗೆ ಬಂದು ತೈಲೂರು ಕೆರೆಯಲ್ಲಿ ಬೀಡು ಬಿಟ್ಟಿವೆ.
ಜಿಲ್ಲೆಯ ಮದ್ದೂರು ತಾಲೂಕಿನ ತೈಲೂರು ಕೆರೆಯಲ್ಲಿ ಆನೆಗಡು ಬೀಡುಬಿಟ್ಟು, ನೀರಿನಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿವೆ. ಎರಡು ಮರಿಯಾನೆ ಹಾಗೂ ನಾಲ್ಕು ದೊಡ್ಡ ಆನೆಗಳು ಕೆರೆಯ ನೀರಿನಲ್ಲಿ ಓಡಾಡುತ್ತಿವೆ. ಆನೆಗಳು ಎರಡು ದಿನಗಳ ಹಿಂದೆ ಮದ್ದೂರಿನ ಬ್ಯಾಡರಹಳ್ಳಿ ಮತ್ತು ಚಂದಳ್ಳಿಯಲ್ಲಿ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡಿದ್ದವು. ಇದೀಗ ಆನೆಗಳು ಕೆರೆಯಲ್ಲಿ ಬೀಡುಬಿಟ್ಟಿವೆ. ಮುತ್ತತ್ತಿ ಅರಣ್ಯ ಪ್ರದೇಶದಿಂದ ಆನೆಗಳು ಬಂದಿರಬಹುದು ಎಂದು ಹೇಳಲಾಗುತ್ತಿದೆ.
ಆನೆಗಳು ಕೆರೆಯಲ್ಲಿರುವ ವಿಚಾರ ತಿಳಿದು ಜನರು ಕುತೂಹಲದಿಂದ ಕೆರೆಯ ಬಳಿ ಜಮಾಯಿಸಿದ್ದಾರೆ. ಆನೆಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದು, ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ.