ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪತ್ನಿ ಮತ್ತು ಆಕೆಯ ಪ್ರಿಯಕರ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಪತ್ನಿ ಶೈಲಜಾ ಹಾಗೂ ಪ್ರಿಯಕರ ಆನಂದ್ ಬಂಧಿತ ಆರೋಪಿಗಳು. ಪತಿ ಪ್ರಸನ್ನ ಕುಮಾರ್ ಅವರ ದೂರಿನ ಹಿನ್ನೆಲೆಯಲ್ಲಿ ಜ್ಞಾನಭಾರತಿ ಪೊಲೀಸರು ಈಗ ಇಬ್ಬರನ್ನೂ ಬಂಧಿಸಿದ್ದಾರೆ.
ಏನಿದು ಪ್ರಕರಣ?
ಆರೋಪಿ ಶೈಲಜಾ ಪ್ರಸನ್ನಕುಮಾರ್ ಎಂಬುವರನ್ನು ಮದುವೆಯಾಗಿದ್ದರೂ ಕಳೆದ 5 ವರ್ಷಗಳಿಂದ ಆನಂದ್ ಎಂಬಾತನ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದಳು. ಈ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಪತಿ ಪ್ರಸನ್ನ ಕುಮಾರ್ ಪ್ರಶ್ನೆ ಮಾಡಿದ್ದರು.
ಪತಿ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆ ಎಂದು ತಿಳಿದ ಶೈಲಜಾ, ಪ್ರಸನ್ನ ಕುಮಾರ್ ಮುಗಿಸಲು ಪ್ರಿಯಕರನ ಜೊತೆ ಸೇರಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿ ಕೊಲ್ಲುವ ಸಂಚು ರೂಪಿಸಿದ್ದಳು. ಆದರೆ ಅವರ ಪ್ಲಾನ್ ಯಶಸ್ವಿ ಆಗದ ಕಾರಣ ಬೇರೆ ರೀತಿಯಲ್ಲಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಳು.
ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡುವ ಸಂಚು ಪತ್ನಿಯ ಫೋನ್ ನಲ್ಲಿ ರೆಕಾರ್ಡ್ ಆಗಿತ್ತು. ಈ ಆಡಿಯೋವನ್ನು ಪತ್ನಿಗೆ ತಿಳಿಯದಂತೆ ಪತಿ ಪಡೆದುಕೊಂಡು ಪೋಲಿಸರಿಗೆ ದೂರು ನೀಡಿದ್ದಾರೆ. ಜ್ಞಾನಭಾರತಿಯ ಪೊಲೀಸರು ಪತಿ ನೀಡಿದ ಮೊಬೈಲ್ ಆಡಿಯೋ ರೆಕಾರ್ಡ್ ಆಧಾರದ ಮೇಲೆ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.