ಚಿಕ್ಕಮಗಳೂರು: ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಕೊಲೆಗೆ ರವಿಬೆಳಗೆರೆ ಅವರು ನೀಡಿದ ಸುಪಾರಿ ಪ್ರಕರಣ ಸಂಬಂಧ ಸುನಿಲ್ ಪತ್ನಿ ಸುಚಿತಾ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದು, ವಿಷಯ ಕೇಳಿ ನನಗೆ ಶಾಕ್ ಆಗಿದೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಹೆಗ್ಗರವಳ್ಳಿಯಲ್ಲಿ ಮಾತಾನಾಡಿದ ಸುಚಿತಾ, ಶನಿವಾರ ಮಧ್ಯಾಹ್ನ ಸುಮಾರು 2 ಗಂಟೆಗೆ ನನಗೆ ವಿಷಯ ತಿಳಿಯಿತು. ನೋಡಿದ ತಕ್ಷಣ ನಮಗೆ ಭಯ ಆಯಿತು. ಅಷ್ಟೇ ಅಲ್ಲದೇ ಇದನ್ನು ಕೇಳಿ ತುಂಬಾ ನೋವಾಗುತ್ತಿದೆ. ಮಗನ ತರ ಸಾಕಿ, ಆಶ್ರಯ ಕೊಟ್ಟು ಈ ರೀತಿ ಮಾಡಿದ್ದಾರೆ. 14 ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಬೇರೆಕಡೆ ಹೋಗಿಲ್ಲ. ಆದರೂ ಇಷ್ಟು ದೊಡ್ಡ ವ್ಯಕ್ತಿ ಜೊತೆಲಿದ್ದು, ಸುಪಾರಿ ಕೊಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ನೋವಿನಿಂದ ಹೇಳಿದ್ದಾರೆ.
ನಮಗೆ ಇನ್ನು ಜೀವ ಭಯ ಇದೆ. ಮುಂದೆ ಏನು ಮಾಡ್ತಾರೋ ಗೊತ್ತಿಲ್ಲ. ಸುಪಾರಿ ಕೊಟ್ಟು ಮಾಡಿದ್ದಾರೆ ಅಂದ್ರೆ ಇದನ್ನು ನಿಲ್ಲಿಸಲ್ಲ. ಆದ್ದರಿಂದ ರಾಜ್ಯ ಸರ್ಕಾರ ನಮಗೆ, ಮನೆಗೆ, ನನ್ನ ಗಂಡನಿಗೂ ರಕ್ಷಣೆ ಕೊಡಬೇಕು ಎಂದು ಕೇಳಿಕೊಂಡಿದ್ದಾರೆ.
ಹತ್ಯೆಗೆ ಯಾವುದೇ ಸಂಬಂಧ ಇಲ್ಲ. ಯಾಕೆಂದರೆ 2013 ರಲ್ಲಿ ಅವರನ್ನು ಎಂಡಿ ಆಗಿ ಹಾಯ್ ಬೆಂಗಳೂರು ಆಫಿಸ್ಗೆ ತಂದ್ರು. ಇವರು ಮ್ಯಾನೇಜರ್ ಆದ್ಮೇಲೆ ಆಫಿಸ್ಗೆ ವಾರದಲ್ಲಿ ಎರಡು ಬಾರಿ ಹೋಗಿ ಎಲ್ಲನೂ ಫೈನಲ್ ಮಾಡುತ್ತಿದ್ದರು. ಎಂಡಿ ಆಗಿ ಎಲ್ಲರಿಗೂ ಫೋನ್ ಮಾಡಿ ವಿಷಯವನ್ನು ತಿಳಿದುಕೊಳ್ಳಬೇಕು. ಆದ್ದರಿಂದ ಫೋನ್ ಮಾಡುತ್ತಿದ್ದರು. ಈ ವಿಚಾರವನ್ನಿಟ್ಟುಕೊಂಡು ಅಕ್ರಮ ಸಂಬಂಧ ಇದೆ ಎಂದು ಈ ರೀತಿ ಮಾಡುವುದು ತಪ್ಪು ಎಂದು ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಸುನೀಲ್ ಹೆಗ್ಗರವಳ್ಳಿ ಸಹೋದರ ಪರಮೇಶ್, 15 ವರ್ಷ ನನ್ನ ತಮ್ಮನನ್ನ ಸಾಕಿ, ಈಗ ಕೊಲೆಗೆ ಸುಪಾರಿ ಕೊಟ್ಟಿರೋದು ನಮಗೆ ತುಂಬಾ ದುಃಖವಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.