ತುಮಕೂರು: ಇಲ್ಲಿನ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್ ಅನ್ನು ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ನಿರಾಕರಿಸಿದ್ದಾರೆ.
ವಿವಿಯ 10 ನೇ ಘಟಿಕೋತ್ಸವದ ಅಂಗವಾಗಿ ಇಬ್ಬರಿಗೆ ಡಾಕ್ಟರೇಟ್ ಪ್ರಧಾನ ಮಾಡಲು ವಿವಿ ಸಿಂಡಿಕೇಟ್ ನಿರ್ಧರಿಸಿತ್ತು. ಪವಾಡ ರಹಸ್ಯ ಬಯಲು ಖ್ಯಾತಿಯ ಹುಲಿಕಲ್ ನಟರಾಜ್ ಮತ್ತು ಧಾರ್ಮಿಕ ಕ್ಷೇತ್ರದಿಂದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಈ ಇಬ್ಬರಿಗೆ ಡಾಕ್ಟರೇಟ್ ನೀಡಲು ರಾಜ್ಯಪಾಲ ವಿಆರ್ ವಾಲಾ ಅನುಮೋದನೆ ಕೂಡಾ ಮಾಡಿದ್ದರು. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸಾಧಿಸುವುದು ಇನ್ನೂ ಬಹಳಷ್ಟಿದೆ ಎಂಬ ಕಾರಣ ನೀಡಿ, ಸಿದ್ಧಲಿಂಗ ಸ್ವಾಮೀಜಿ ಡಾಕ್ಟರೇಟ್ ಪಡೆಯದಿರಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಬೆಂಗಳೂರು ವಿವಿ ಗೌರವ ಡಾಕ್ಟರೇಟ್ ನೀಡಲು ಮುಂದಾಗಿತ್ತು. ಆದರೆ ದ್ರಾವಿಡ್, ಕ್ರಿಕೆಟ್ ಆಡಿದ್ದಕ್ಕೆ ಡಾಕ್ಟರೇಟ್ ಪದವಿ ನೀಡುವುದು ಬೇಡ. ಕ್ರಿಕೆಟ್ಗೆ ಸಂಬಂಧಪಟ್ಟಂತೆ ಶೈಕ್ಷಣಿಕ ಪ್ರಬಂಧ ಮಂಡಿಸಿ ನಾನು ಡಾಕ್ಟರೇಟ್ ಪದವಿಯನ್ನು ಪಡೆಯುತ್ತೇನೆ ಎಂದು ವಿವಿಗೆ ತಿಳಿಸಿ ಗೌರವ ಡಾಕ್ಟರೇಟ್ ನಿರಾಕಸಿದ್ದರು.