ಬೆಂಗಳೂರು: ಕರ್ನಾಟಕದಲ್ಲಿ ಚುನಾವಣೆಗೆ ಇನ್ನು ಎರಡು ತಿಂಗಳು ಮಾತ್ರವಿದೆ. ಈಗಾಗಲೇ ರಾಜಕೀಯ ನಾಯಕರೆಲ್ಲ ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ನಾಯಕರೆಲ್ಲ ಚಿಕ್ಕಪೇಟೆಗೆ ಸಿಕ್ಕಾಪಟ್ಟೆ ವಿಸಿಟ್ ಕೊಡ್ತಾ ಇದ್ದಾರೆ ಎನ್ನಲಾಗಿದೆ.
ನೋಟ್ ಬ್ಯಾನ್ನಿಂದ ಮಂಕು ಕವಿದಿದ್ದ ಚಿಕ್ಕಪೇಟೆ ಸೀರೆಯಂಗಡಿ ವ್ಯಾಪಾರಿಗಳ ಮುಖದಲ್ಲಿ ಈಗ ಎಲೆಕ್ಷನ್ ವ್ಯಾಪಾರದ ನಗು ಮೂಡಿದೆ. ವೋಟು ಹಾಕಿಸಿಕೊಳ್ಳೋಕೆ, ಮಹಿಳಾ ಮತಗಳನ್ನು ಓಲೈಸೋಕೆ ಈಗ ಸೀರೆ ರಾಜಕಾರಣಕ್ಕೆ ನಾಯಕರು ಮುಂದಾಗುತ್ತಿದ್ದಾರೆ.
ಕೇವಲ ಬೆಂಗಳೂರು ಮಾತ್ರವಲ್ಲ, ರಾಜ್ಯದ ಮೂಲೆ ಮೂಲೆಯಿಂದಲೂ ರಾಜಕೀಯ ನಾಯಕರು ಚಿಕ್ಕಪೇಟೆಯಲ್ಲಿ ಎಲೆಕ್ಷನ್ ಸೀರೆ ಖರೀದಿ ಮಾಡ್ತಾರಂತೆ. ಸೀರೆ ಜೊತೆಗೆ ಮೂಗುತಿ, ವೀಳ್ಯೆ ಕೊಟ್ಟು ಮರುಳು ಮಾಡೋ ಟ್ರೆಂಡ್ ಈವಾಗಲೂ ಬದಲಾಗಿಲ್ಲ. ಚಿಕ್ಕಪೇಟೆ ವ್ಯಾಪಾರಿಗಳು ಎಲೆಕ್ಷನ್ ಸೀರೆಯನ್ನು ಬಾಂಬೆಯಿಂದ ಲೋಡ್ಗಟ್ಟಲೇ ತರುತ್ತಿದ್ದಾರೆ.
ಈಗಾಗಲೇ ಸೀರೆ ವಿಚಾರ ಸದನದಲ್ಲಿ ಸದ್ದು ಮಾಡುತ್ತಿದೆ. ಆದ್ರೇ ಗಲಾಟೆ ಮಾಡೋರು ಸೇರಿದಂತೆ ಸೀರೆಗೆ ನಾಯಕರು ಬಹುತೇಕ ಜೋತು ಬಿದ್ದಿದ್ದಾರೆ ಅನ್ನೋದು ಅಷ್ಟೇ ಸತ್ಯ.