ಮೈಸೂರು: ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಸಿಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ವಿರುದ್ಧ ಮಾಜಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ನಿಲ್ತಾರೆ ಅಂತಾ ಹೇಳಲಾಗುತ್ತಿತ್ತು. ವಿಜಯೇಂದ್ರ ಇಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಸಹ ಮುಂದಾಗಿದ್ದರು. ಆದ್ರೆ ಕೊನೆ ಕ್ಷಣದಲ್ಲಿ ಬಿಎಸ್ವೈ ಪುತ್ರನಿಗೆ ಬಿ ಫಾರಂ ತಪ್ಪಿದೆ.
ನಂಜನಗೂಡು ಕ್ಷೇತ್ರದಲ್ಲಿ ಇಂದು ಬಿಜೆಪಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿತ್ತು. ಹೆಲಿಕಾಪ್ಟರ್ ನಿಂದ ಬಂದಿಳಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಫೋನ್ ಕಾಲ್ ಬಂದಿತ್ತು. ಹೈಕಮಾಂಡ್ ಒಪ್ಪಿಗೆ ಇಲ್ಲದೇ ವಿಜಯೇಂದ್ರ ನಾಮಪತ್ರವನ್ನು ಸಲ್ಲಿಸುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ಲಾಲ್ ಬಿಎಸ್ವೈಗೆ ಖಡಕ್ ಸೂಚನೆ ನೀಡಿದ್ದರು ಎಂದು ಮೂಲಗಳು ಮಾಹಿತಿ ನೀಡಿವೆ.
ನಾವು ಪಟ್ಟಿ ಫೈನಲ್ ಮಾಡುವರೆಗೂ ನಿಮ್ಮ ಪುತ್ರ ನಾಮಪತ್ರವನ್ನು ಸಲ್ಲಿಸಬಾರದು. ಒಂದು ವೇಳೆ ನೀವು ಬಿ ಫಾರಂ ಕೊಟ್ಟರೂ, ನಾವು ಸಿ ಫಾರಂ ಕೊಡುತ್ತೇವೆ ಎಂದು ಕರೆ ಮಾಡಿ ತಿಳಿಸಿದ್ದಾರೆ.
ರಾಮ್ಲಾಲ್ ಅವರ ಕರೆ ಬರುತ್ತಿದ್ದಂತೆ ಸಮಾವೇಶದಲ್ಲಿ ವರುಣಾ ಕ್ಷೇತ್ರದಿಂದ ಸಾಮಾನ್ಯ ಕಾರ್ಯಕರ್ತರನ್ನು ನಿಲ್ಲಿಸಲಾಗುವುದು ಅಂತಾ ಯಡಿಯೂರಪ್ಪ ಘೋಷಣೆ ಮಾಡಿದ್ರು. ಯಡಿಯೂರಪ್ಪ ಹೇಳಿಕೆ ನೀಡುತ್ತಿದ್ದಂತೆ ಕಾರ್ಯಕರ್ತರೆಲ್ಲಾ ಆಕ್ರೋಶಗೊಂಡು ವಿಜಯೇಂದ್ರ ಅವರನ್ನು ಮುತ್ತಿಗೆ ಹಾಕಿದ್ರು.
ರಾಮ್ಲಾಲ್ ಕರೆ ಮಾಡಿರುವ ವಿಚಾರ ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಸಹ ತಿಳಿದಿಲ್ಲ ಎಂಬ ಮಾಹಿತಿಗಳು ಲಭ್ಯವಾಗಿದೆ. ನಂಜನಗೂಡಿನಲ್ಲಿ ಉಂಟಾದ ಕ್ಷಿಪ್ರ ಬೆಳವಣಿಗೆಗೆ ಅಮಿತ್ ಶಾ ವರದಿಯನ್ನು ಕೇಳಿದ್ದಾರೆ ಎನ್ನಲಾಗಿದೆ.
ಷಡ್ಯಂತ್ರ: ಬಿ.ಎಸ್.ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಆರ್ಎಸ್ಎಸ್ ನಾಯಕರು ಹೈಕಮಾಂಡ್ ಮೂಲಕ ನಾಮಪತ್ರ ಸಲ್ಲಿಸಬಾರದೆಂದು ಹೇಳಿಸಿತಾ ಅಥವಾ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಸಂತೋಷ್ ನಡೆಸಿದ ಷಡ್ಯಂತ್ರಕ್ಕೆ ವಿಜಯೇಂದ್ರ ಬಲಿಯಾದ್ರಾ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಈಗ ಹರಿದಾಡುತಿದ್ದು, ಕೊನೆ ಗಳಿಗೆಯಲ್ಲಿ ಈ ಬದಲಾವಣೆ ಮಾಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಈಗ ರಾಜ್ಯ ನಾಯಕರು ಉತ್ತರ ನೀಡಬೇಕಿದೆ. ಇದನ್ನೂ ಓದಿ: ಆರ್ಎಸ್ಎಸ್ ವರ್ಸಸ್ ಯಡಿಯೂರಪ್ಪ: ಆಕ್ರೋಶಕ್ಕೆ ತಿರುಗಿದ ಬಿಜೆಪಿ ಭಿನ್ನಮತ