ಮಂಗಳೂರು: ನಟ ಪ್ರಕಾಶ್ ರೈ ಅವರಿಗೆ ನಗರದ ವಿಮಾನ ನಿಲ್ದಾಣದಲ್ಲಿ ನಾಲ್ವರು ಬೆದರಿಕೆ ಹಾಕಿರೋ ಘಟನೆಯೊಂದು ನಡೆದಿರುಬವ ಬಗ್ಗೆ ಬೆಳಕಿಗೆ ಬಂದಿದೆ.
ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾರ್ ಡ್ರೈವರ್ ಬಳಿ ಬಂದ ನಾಲ್ವರು ಕೆಲ ಪ್ರಶ್ನೆಗಳನ್ನು ಹಾಕಿದ್ದಾರೆ. ಪ್ರಕಾಶ್ ರೈ ಎಲ್ಲಿ ಉಳಿದುಕೊಳ್ಳುತ್ತಾರೆ ಅಂತ ಹೇಳಿ ಕಾರ್ ಡ್ರೈವರ್ ಗೆ ಧಮ್ಕಿ ಹಾಕಿದ್ದಾರೆ. ಪೊಲೀಸರು ಬಂದ ಬಳಿಕ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದರಿಂದ ಇಲ್ಲಿ ನನಗೆ ಆತಂಕದ ವಾತಾವರಣ ನಿರ್ಮಾಣವಾಗಿದೆ ಅಂತ ರೈ ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
ನನ್ನ ಹೇಳಿಕೆಯನ್ನು ಸದಾ ತಿರುಚಲಾಗುತ್ತದೆ. ನಾನು ರಾಜಕೀಯ ಪಕ್ಷದಿಂದ ಬೆಳೆದಿಲ್ಲ. ರಾಜಕೀಯದಲ್ಲಿ ಆತಂಕದ ವಾತಾವರಣ ಇದೆ. ನಾನು ಆಳುವ ಪಕ್ಷದ ವಿರೋಧಿಯಾಗಿದ್ದೇನೆ. ಒಬ್ಬ ಪ್ರಜೆ, ಪ್ರಜೆಯಾಗಿರೋದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರಶ್ನಿಸುವ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. #just asking ಅಭಿಯಾನ ನಿರಂತರವಾಗಿರುತ್ತದೆ ಅಂತ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಾಪ್ ಸಿಂಹ ಜೊತೆ ದ್ವೇಷವಿಲ್ಲ: ನಾನು ಯಾವುದೇ ಚುನಾವಣಾ ಪ್ರಚಾರಕ್ಕೆ ಹೋಗಲ್ಲ. ಆದ್ರೆ ಕೆಲ ಪಕ್ಷಗಳ ವಿರುದ್ಧ ಮಾತನಾಡುತ್ತೇನೆ. ಬಿಜೆಪಿ ಕೋಮುವಾದದ ಬಗ್ಗೆ ಮಾತನಾಡ್ತೇನೆ. ಬಿಜೆಪಿ ಕೋಮುವಾದ ದೇಶದ ಸಾಮರಸ್ಯ ಹಾಳು ಮಾಡುತ್ತದೆ. ಸಂಸದ ಪ್ರತಾಪ್ ಸಿಂಹ ಬಗ್ಗೆ ನನಗೆ ದ್ವೇಷ ಇಲ್ಲ. ಅವರು ಮುಖವಾಡ ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೊಂಟದ ಕೆಳಗಿನ ಭಾಷೆ ಬಳಕೆ ಮಾಡ್ತಾರೆ. ನಾನು ಒಬ್ಬ ಪ್ರಜೆಯಾಗಿ ಪ್ರತಾಪ್ ಸಿಂಹ ವಿರುದ್ಧ ಕೇಸ್ ಹಾಕಿದ್ದೇನೆ ಅಂತ ಅವರು ಹೇಳಿದ್ರು.
ಆರೋಪಿಗಳ ಖುಲಾಸೆಗೆ ವಿಷಾದ: ಪಬ್ ದಾಳಿ ಆರೋಪಿಗಳಿಗೆ ಕೋರ್ಟ್ ಖುಲಾಸೆ ವಿಚಾರದ ಕುರಿತು ಇದೇ ವೇಳೆ ಮಾತನಾಡಿದ ಅವರು, ಕೋರ್ಟ್ ಸಾಕ್ಷ್ಯಾಧಾರ ಇಲ್ಲ ಅಂತ ಹೇಳಿದೆ. ಕಾರ್ಯಕರ್ತರು ಹೊಡೆದಿರುವ ವಿಡಿಯೋ ಕೂಡಾ ಇದೆ. ಕೋರ್ಟ್ ಆಜ್ಞೆ ಜನಸಾಮಾನ್ಯರನ್ನು ಗೊಂದಲ ಮಾಡಿದೆ. ಕೋರ್ಟ್ ಆರ್ಡರ್ ಕೊಟ್ಟಿದ್ದು ನ್ಯಾಯನಾ? ಆಡಳಿತರೂಢ ಕಾಂಗ್ರೆಸ್ ಇದರ ಬಗ್ಗೆ ಪ್ರಶ್ನೆ ಮಾಡಬಹುದಿತ್ತು. ಪ್ರಶ್ನೆ ಮಾಡಿದ್ರೆ ವಿರೋಧಿಯಾಗ್ತಿವಿ ಎಂಬ ಭಯ ಇದೆ. ಕಾಂಗ್ರೆಸ್ ರಾಜಕೀಯ ಪ್ರದರ್ಶನ ಮಾಡುತ್ತಿದೆ ಅಂದ್ರು.