ಧಾರವಾಡ: ಗ್ರಾಮ ಪಂಚಾಯ್ತಿಯವರು ಕೆಲಸದಿಂದ ತೆಗೆದ್ರು ಎಂಬ ಕಾರಣಕ್ಕೆ ಹಂಗಾಮಿ ವಾಟರ್ ಮ್ಯಾನ್ನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಗೌಸಸಾಬ ಮಾರಡಗಿ (55) ಆತ್ಮಹತ್ಯೆ ಮಾಡಿಕೊಂಡ ವಾಟರ್ಮ್ಯಾನ್. ಮಾರಡಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಗೋವನಕೊಪ್ಪದಲ್ಲಿ ಗೌಸಸಾಬ್ ಕಳೆದ 18 ವರ್ಷಗಳಿಂದ ವಾಟರ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಎರಡು ತಿಂಗಳ ಹಿಂದೆ ಪಂಚಾಯ್ತಿಯವರು ಏಕಾಏಕಿ 10ನೇ ತರಗತಿ ಪಾಸ್ ಆಗಿದ್ದರೆ ಮಾತ್ರ ಕೆಲಸಕ್ಕೆ ಇಟ್ಟುಕೊಳ್ಳುವದಾಗಿ ಹೇಳಿ ಕೆಲಸದಿಂದ ತೆಗೆದು ಹಾಕಿದ್ದಾರೆ.
ಇದರಿಂದ ಮನನೊಂದು ಮಾರಡಗಿ ಇಂದು ಬೆಳಗಿನ ಜಾವ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ನಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಇನ್ನೂ ಮಕ್ಕಳ ಮದುವೆ ಕೂಡಾ ಮಾಡಬೇಕಿದ್ದ ಗೌಸಸಾಬ, ಕೆಲಸ ಹೋಗಿದ್ದರಿಂದ ಮನಸ್ಸಿಗೆ ಬೇಸರ ಮಾಡಿಕೊಂಡಿದ್ದರು. ಈ ಮಧ್ಯೆ ಕೆಲಸದಿಂದ ಹೊರಹಾಕಿದ ವಿಚಾರ ಅವರನ್ನು ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪಂಚಾಯ್ತಿಯವರ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ತನಿಖೆ ಆರಂಭಿಸಿದ್ದಾರೆ.