ಚಾಮರಾಜನಗರ: ಹುಲಿಯಂತಹ ಬಲಿಷ್ಠ ಪ್ರಾಣಿಯನ್ನೇ ಕರಡಿಯೊಂದು ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯ ನಾಗರಹೊಳೆ ಅರಣ್ಯದಲ್ಲಿ ಸಫಾರಿಗೆ ತೆರಳಿದ ಪ್ರವಾಸಿಗರೊಬ್ಬರಿಗೆ ಸೆರೆಸಿಕ್ಕಿದೆ.
ಬೆಂಗಳೂರಿನ ಅಭಿಷೇಕ್ ಎಂಬುವವರು ನಾಗರಹೊಳೆಯಲ್ಲಿ ಸಫಾರಿಗೆ ಹೋಗಿದ್ದ ಸಂದರ್ಭದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ. ವನ್ಯಜೀವಿ ತಜ್ಞರು ಹೇಳುವ ಪ್ರಕಾರ ನೀರಿಗಾಗಿ ಇಂತಹ ಕಾದಟಗಳು ಇತ್ತೀಚೆಗೆ ಹೆಚ್ಚಾಗಿ ನಡೆಯುತ್ತಿದೆ. ನೀರಿಗೋಸ್ಕರ ಎದುರಾಳಿ ಪ್ರಾಣಿ ಎಷ್ಟೇ ಬಲಿಷ್ಠವಾಗಿದ್ದರು ಬದುಕುವ ಸಲುವಾಗಿ ಹೋರಾಟ ಮಾಡುತ್ತವೆ ಎನ್ನುತ್ತಾರೆ.
ಸದ್ಯ ಕರಡಿ ಹುಲಿಯನ್ನು ಅಟ್ಟಿಸಿಕೊಂಡು ಹೋಗಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಈ ಹಿಂದೆ ಬಂಡಿಪುರದಲ್ಲಿ ಇಂತಹದೆ ದೃಶ್ಯವೊಂದು ಕ್ಯಾಮರಾಕ್ಕೆ ಸೆರೆಸಿಕ್ಕಿತ್ತು. ಆ ದೃಶ್ಯದಲ್ಲಿ ಕೆರೆಗೆ ಹುಲಿಯೊಂದು ನೀರು ಕುಡಿಯಲು ಆಗಮಿಸಿದ್ದ ವೇಳೆ ಕೆರೆಯ ಬಳಿ ಇದ್ದ ಆನೆಗಳು ಹುಲಿಯನ್ನು ಆ ಸ್ಥಳದಿಂದ ಓಡಿಸಿದ್ದವು.