ಬೆಂಗಳೂರು: ಸಿಇಟಿ ಫಲಿತಾಂಶ ಪ್ರಕಟವಾದ ದಿನವೇ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮುಚ್ಚುವ ಭೀತಿ ಎದರಾಗಿದೆ. ಅಕ್ರಮದ ಗೂಡಾಗಿರುವ ವಿಶ್ವವಿದ್ಯಾಲಯದಲ್ಲಿ ಬಿಡಿಗಾಸು ಇಲ್ಲದೇ ಮುಚ್ಚುವ ಭೀತಿಯಿದೆ. 6 ತಿಂಗಳಾದ್ರೂ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದ ಪ್ರತಿಷ್ಠಿತ ವಿಟಿಯು ಭ್ರಷ್ಟಾಚಾರದ ಕೂಪವಾಗಿದೆ ಎಂದು ಸ್ವತಃ ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಒಪ್ಪಿಕೊಂಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾತನಾಡಿ ಬಸವರಾಜ ರಾಯರೆಡ್ಡಿ, ಈಗಿನ ಪರಿಸ್ಥಿತಿಯಲ್ಲಿ ವಿಟಿಯುವನ್ನು ಕ್ಲೋಸ್ ಮಾಡಬೇಕಾಗಿದೆ. ವಿಟಿಯುನಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ವಿಟಿಯು ವಿದ್ಯಾರ್ಥಿಗಳ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಆರು ತಿಂಗಳಾದ್ರೂ ಫಲಿತಾಂಶ ನೀಡಿಲ್ಲ. ಈ ಹಿಂದೆ ಇದ್ದ ಕುಲಪತಿಗಳು ಅಕ್ರಮ ನಡೆಸಿದ್ದರಿಂದ ಈ ಪರಿಸ್ಥಿತಿಗೆ ಕಾರಣವಾಗಿದೆ ಅಂದ್ರು.
ಈ ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ಹೊಸ ಪದ್ಧತಿ ತರುತ್ತಿದ್ದೇವೆ. ಮುಂದಿನ ಪರೀಕ್ಷೆಯಿಂದ ಎಲ್ಲವೂ ಸರಿ ಹೋಗಲಿದೆ. ಹಿಂದಿನ ಕುಲಪತಿಗಳ ವಿರುದ್ಧ ತನಿಖೆ ನಡೆಸಲು ಆದೇಶಿಸಿದ್ದೇವೆ. ನಾಳೆ ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸಂಪೂರ್ಣ ವರದಿ ನೀಡುತ್ತೇನೆ ಅಂತ ಹೇಳಿದ್ರು.