ಕಾರವಾರ: 18 ವರ್ಷ ಪೂರ್ಣಗೊಳಿಸಿದವರು ಮತದಾರರ ಗುರುತಿನ ಚೀಟಿ ಪಡೆಯುವುದು ಎಂದರೆ ಕಷ್ಟದ ಕೆಲಸ. ಸರ್ಕಾರಿ ಕಚೇರಿಗೆ ಅಲೆದು ಮತದಾನ ಗುರುತಿನ ಚೀಟಿ ಮಾಡಿಸಿದರು, ಅದು ಕೈ ಸೇರಲು ತಿಂಗಳುಗಳೇ ಬೇಕು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ವಿಶಿಷ್ಟವಾಗಿ ಗುರುತಿನ ಚೀಟಿ ನೀಡುವ ಅಭಿಯಾನ ನಡೆಸಿದೆ.
ಹೌದು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಮತದಾರ ಪಟ್ಟಿಯಿಂದ ಹೊರಗುಳಿದ ಹಾಗೂ ಹೊಸದಾಗಿ ಗುರುತಿನ ಚೀಟಿ ಮಾಡಿಸಿಕೊಳ್ಳಲು ಸಾಕಷ್ಟು ಅವಕಾಶವನ್ನು ನೀಡಿ ಪ್ರಚಾರ ನಡೆಸುತ್ತಿದೆ. ಮತದಾರರಿಗೆ ಜಿಲ್ಲೆಯಾದ್ಯಾಂತ ಮಾಹಿತಿ ಹಾಗೂ ಕಾರ್ಡ್ ವಿತರಣೆಯನ್ನು ಶೀಘ್ರದಲ್ಲಿ ನೀಡುತ್ತಿದೆ. ಇದರ ಒಂದು ಭಾಗವಾಗಿ ದೇಶದಲ್ಲಿಯೇ ಮೊದಲ ಬಾರಿ ಮಿಲೇನಿಯಮ್ ಮತದಾರರಿಗೆ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಮತದಾರರ ಗುರುತಿನ ಚೀಟಿ ನೀಡಿ ಹೊಸ ಇತಿಹಾಸ ಸೃಷ್ಟಿಸಲಾಗಿದೆ.
ಏನಿದು ಮಿಲೇನಿಯಮ್ ಮತದಾರ: 2000 ನೇ ವರ್ಷದ ಜನವರಿ 1 ರಂದು ಜನಿಸಿದವರು ಈ ವರ್ಷ 18 ವರ್ಷ ಕ್ಕೆ ಕಾಲಿಟ್ಟಿದ್ದರೆ. ಇವರನ್ನು ಮಿಲೇನಿಯಮ್ ಮತದಾರ ಎಂದು ಪರಿಗಣಿಸಲಾಗುತ್ತೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಜನಿಸಿದವರು 13 ಮಂದಿ ಇದ್ದಾರೆ. ಇವರಿಗೆ ಮತದಾರರ ಗುರುತಿನ ಚೀಟಿಯನ್ನು ವಿಶಿಷ್ಟವಾಗಿ ನೀಡಲಾಗಿದೆ.
ಕಾರವಾರದ ಅರಬ್ಬಿ ಸಮುದ್ರ ದೇವಭಾಗ್ ಲೈಟ್ ಹೌಸ್ ಬಳಿಯಲ್ಲಿ 10 ರಿಂದ 15 ಅಡಿ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡುವ ಮೂಲಕ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಜಿಲ್ಲಾಪಂಚಾಯ್ತಿ ಸಿಇಓ ಎಲ್ ಚಂದ್ರಶೇಖರ್ ನಾಯ್ಕ ಹಾಗೂ ಬಾರನ್ ವೈಲ್ಡ್ ಅಡ್ವೆಂಚರ್ ಸ್ಕೂಬಾ ಡೈ ತರಬೇತುದಾರಾದ ರಂಜಿತ್ ರವರೊಂದಿಗೆ ತೆರಳಿ ಭಟ್ಕಳ ತಾಲೂಕಿನ ಮುರಡೇಶ್ವರದ ದೀಕ್ಷ, ಪೃಥ್ವಿ ಎಂಬುವವರಿಗೆ ಸಮುದ್ರದಾಳದಲ್ಲಿ ಮತದಾರರ ಗುರುತಿನ ಚೀಟಿ ವಿತರಿಸಿದರು. ಬಳಿಕ `ಪ್ರತಿ ಮತ ಅಮೂಲ್ಯ ಮತ’ ಎಂಬ ಘೋಷವಾಕ್ಯದ ಸಂದೇಶ ಸಾರುವ ಬ್ಯಾನರ್ ಹಿಡಿದು ಸಂದೇಶ ನೀಡಿದರು.
18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾನ ಹಕ್ಕನ್ನು ಪಡೆಯಬೇಕು. ಜಿಲ್ಲೆಯಲ್ಲಿ 11,34,513 ಮತದಾರರಿದ್ದಾರೆ. ಅಂಗವಿಕಲರಿಗೂ ಕೂಡ ಮತದಾನದ ಹಕ್ಕು ತಪ್ಪದಂತೆ ನೀಡಲು ಹೆಚ್ಚಿನ ಪ್ರಾಮುಖ್ಯತೆ ನೀಡಿ 13,612 ಅಂಗವಿಕಲರಿಗೆ ಹೊಸದಾಗಿ ಎಪಿಕ್ ಕಾರ್ಡ್ ನೀಡಲಾಗಿದೆ. ಆದರೆ ಇನ್ನು 362 ಅಂಗವಿಕಲರು ಎಪಿಕ್ ಕಾರ್ಡ ವಂಚಿತರಾದವರಿದ್ದಾರೆ. ಇಂತಹವರಿಗೂ ಸಹ ಶೀಘ್ರದಲ್ಲೇ ಮತದಾರರ ಗುರುತಿನ ಚೀಟಿ ನೀಡಲಾಗುತ್ತದೆ. ಅಂಗವಿಕಲರಿಗೆ ಮತದಾನ ಮಾಡಲು ಸಹಾಯ ವಾಗುವಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತೆ. ಯಾವೊಬ್ಬ ವ್ಯಕ್ತಿಯೂ ಮತದಾನದಿಂದ ವಂಚಿತವಾಗಬಾರದೆಂಬುದು ನಮ್ಮ ಅಪೇಕ್ಷೆ. ಹೀಗಾಗಿ ಇದಕ್ಕೆ ಬೇಕಾದ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಎಪಿಕ್ ಕಾರ್ಡ್ ಮಾಡಿಸಿದವರಿಗೆ ಸ್ಕೂಬಾ ಡೈ ಮಾಡಿಸುವ ಮೂಲಕ ವಿನೂತನವಾಗಿ ಪ್ರಚಾರ ಕೈಗೊಂಡಿದ್ದೇವೆ ಎಂದು ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ತಿಳಿಸಿದ್ದಾರೆ.