ಚೆನ್ನೈ: ತಮಿಳುನಾಡಿಗೆ ಸಿಎಂ ಆಗಬೇಕೆಂಬ ಶಶಿಕಲಾ ನಟರಾಜನ್ ಕನಸಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ನಡೆಯಬೇಕಿದ್ದ ಪ್ರಮಾಣವಚನ ಕಾರ್ಯಕ್ರಮ ರದ್ದಾಗಿದೆ.
ತಮಿಳುನಾಡು ರಾಜ್ಯಪಾಲ ವಿದ್ಯಾಸಾಗರ್ ರಾವ್ ಒಂದು ವಾರಗಳ ಕಾಲ ತಮಿಳುನಾಡಿನಲ್ಲಿ ಇಲ್ಲದ ಕಾರಣ ಪ್ರಮಾಣವಚನ ಕಾರ್ಯಕ್ರಮವನ್ನ ರಾಜಭವನ ರದ್ದುಗೊಳಿಸಿದೆ. ಈ ಬಗ್ಗೆ ರಾಜ್ಯಪಾಲರ ಕಚೇರಿಯಿಂದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿಯೂ ರವಾನೆಯಾಗಿದೆ.
ತಮಿಳುನಾಡಿನಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ಮುಂಬೈಗೆ ತೆರಳಿರೋ ರಾಜ್ಯಪಾಲ ವಿದ್ಯಾಸಾಗರ್ ರಾವ್, ಚುನಾವಣೆಯಲ್ಲಿ ಗೆಲ್ಲದೆ ಹಾಗೂ ಯಾವುದೇ ರಾಜಕೀಯ ಅನುಭವ ಇಲ್ಲದ ಶಶಿಕಲಾ ಆಕೆಯ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತೀರ್ಪು ಬಾಕಿ ಇರುವ ಈ ಹೊತ್ತಲ್ಲಿ ಸಿಎಂ ಆಗಬಹುದಾ ಎಂಬ ಬಗ್ಗೆ ಕಾನೂನು ಸಲಹೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಯ ಮೀರಿ ಆಸ್ತಿ ಗಳಿಸಿರೋ ಕೇಸ್ನಲ್ಲಿ ಜಯಲಲಿತಾ ಜೊತೆ ಶಶಿಕಲಾ ಹೆಸರು ಇದ್ದು, ಮುಂದಿನ ವಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು ಬರಲಿದೆ.