ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ಸುಮಾರು 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ. ಇದುವರೆಗೂ ಯಾವ ಆರೋಗ್ಯ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.
ಕಲುಷಿತ ನೀರಿನ ಸೇವನೆಯಿಂದ ಗ್ರಾಮಸ್ಥರು ಚಿಕೂನ್ ಗುನ್ಯಾದಿಂದ ಬಳಲುವಂತಾಗಿದೆ. ಗುಂಡ್ಲುಪೇಟೆ ಉಪಚುನಾವಣೆಯ ವೇಳೆಯಲ್ಲಿ ಗ್ರಾಮಕ್ಕೆ ಬಂದಿದ್ದ ಎಲ್ಲ ರಾಜಕೀಯ ನಾಯಕರು ನಮಗೆ ವೋಟ್ ಕೊಡಿ, ನಾವು ನಿಮಗೆ ನೀರು ಕೊಡ್ತೀವಿ ಅಂತಾ ಭರವಸೆಗಳನ್ನು ನೀಡಿದ್ದರು. ಆದ್ರೆ ಚುನಾವಣೆ ಗೆಲುವಿನ ಬಳಿಕ ಯಾವ ಕಾಂಗ್ರೆಸ್ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಚಿಕೂನ್ ಗುನ್ಯಾ ಬಂದಿದ್ದು ಯಾಕೆ?: ಭೀಮನಬೀಡು ಗ್ರಾಮಸ್ಥರಿಗೆ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಊರಿಗೆ ಒಂದು ಮೇಲ್ಮಟ್ಟದ ನೀರಿನ ಟ್ಯಾಂಕ್ ಇದೆ. ಆದರೆ ಸ್ವಚ್ಛ ನೀರು ಬರುವುದಿಲ್ಲ. ಹೀಗಾಗಿ ಗ್ರಾಮದ ಜನರು ಕುಡಿಯುವ ನೀರಿಗಾಗಿ ಕೆರೆಯ ಮೊರೆ ಹೋಗಿದ್ದಾರೆ. ಆದರೆ ಕೆರೆಯಲ್ಲಿನ ನೀರು ಕಲುಷಿತಗೊಂಡಿದ್ದರಿಂದ ಕುಡಿಯಲು ಯೋಗ್ಯವಾಗಿಲ್ಲ. ಆದ್ರೂ ಗ್ರಾಮಸ್ಥರು ವಿಧಿಯಿಲ್ಲದೇ ಕೆರೆಯ ನೀರನ್ನು ಬಳಸುತ್ತಿದ್ದಾರೆ. ದೀರ್ಘ ಕಾಲದಿಂದ ಕಲುಷಿತವಾಗಿರೋ ನೀರನ್ನು ಕುಡಿಯುವುದರಿಂದ ಗ್ರಾಮದಲ್ಲಿನ 1000ಕ್ಕೂ ಅಧಿಕ ಜನರು ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದಾರೆ.
ಉಪಚುನಾವಣೆ ಪ್ರಚಾರದ ವೇಳೆ ಗ್ರಾಮಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಪ್ರದರ್ಶನ ಮಾಡಿದ್ದರು. ತೀವ್ರ ಮುಜುಗುರಕ್ಕೊಳಗಾದ ಸಿಎಂ ನಮ್ಮ ಅಭ್ಯರ್ಥಿ ಗೀತಾ ಮಹಾದೇವ ಪ್ರಸಾದ್ರಿಗೆ ಮತ ನೀಡಿ ನಿಮಗೆ ನೀರು ಕೊಡ್ತೇವೆ ಎಂದು ಭರವಸೆ ನೀಡಿದ್ದರು.