-ಸಿಸಿಟಿವಿಯಲ್ಲಿ ಸೆರೆಯಾಯ್ತು ಪುಂಡಾಟಿಕೆ
ವಿಜಯಪುರ: ದಸರಾ ಹಬ್ಬದ ಪ್ರಯುಕ್ತ ದೇಣಿಗೆ ನೀಡದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಉಪಮೇಯರ್ ಅವರ ಗುಂಡಾಗಿರಿ ನಡೆಸಿರುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
ಮಹಾನಗರ ಪಾಲಿಕೆ ಉಪಮೇಯರ್ ರಾಜೇಶ್ ದೇವಗಿರಿ ಅವರು ದಸರಾ ಹಬ್ಬದ ಪ್ರಯುಕ್ತ ನಗರದ ಶಾಪೇಟೆಯಲ್ಲಿ ದೇವಿ ಪ್ರತಿಷ್ಠಾಪನೆಗೆ ದೇಣಿಗೆ ಕೇಳಲು ನಗರದ ಮಾರ್ಕೆಟ್ ನಲ್ಲಿರುವ ಶ್ರೀ ಸಾಯಿ ಮೊಬೈಲ್ ಅಂಗಡಿಗೆ ತೆರಳಿದ್ದಾರೆ. ಆಗ ಅಂಗಡಿಯ ಮಾಲೀಕ ಗಂಗಪ್ಪ ಹಂಚಿನಾಳ ಹೊರಗಡೆ ಹೋಗಿದ್ದಾರೆ ನಂತರ ಬನ್ನಿ ಅಂತಾ ತಮ್ಮ ಯಲ್ಲಪ್ಪ ಹಂಚಿನಾಳ ಹೇಳಿದ್ದಾರೆ. ಆಗ ಉಪಮೇಯರ್ ರಾಜೇಶ್ ದೇವಗಿರಿ ಮತ್ತು ಜೊತೆ ಬಂದಿದ್ದ 15 ಜನರು ಅಂಗಡಿಯಲ್ಲಿ ಮೂರು ಜನ ಇದ್ದರಿ ನಿಮ್ಮ ಹತ್ತಿರ 250 ರೂ. ಕೂಡ ಇಲ್ವಾ ಎಂದು ಅವಾಜ್ ಹಾಕಿದ್ದಾರೆ.
ಯಲ್ಲಪ್ಪ ಮತ್ತು ಅಂಗಡಿಯ ಕೆಲಸಗಾರರು ಹಣ ಇಲ್ಲ ಅಂದಿದ್ದಾರೆ. ನಿಮಗೆ ಮಾಲೀಕ ಸಂಬಳ ಎಷ್ಟು ಕೊಡ್ತಾನೆ. ನಮ್ಮ ಜೊತೆ ದೇಣಿಗೆ ಕೇಳಲು ಬನ್ನಿ ಇದಕ್ಕಿಂತ ಹೆಚ್ಚು ಸಂಬಳ ಕೊಡುತ್ತೇವೆ ಎಂದು ಉಪಮೇಯರ್ ಜೊತೆ ಬಂದಿದ್ದ ಸಿದ್ದು ಎಂಬಾತ ಹೇಳಿದ್ದಾರೆ. ಇಷ್ಟಕ್ಕೆ ಇಬ್ಬರಲ್ಲು ಗಲಾಟೆ ಶುರುವಾಗಿದೆ. ಆಗ ನಮಗೆ ಈ ರೀತಿ ಮಾತಾಡತೀಯ ಅಂತಾ ಸಿಟ್ಟಿಗೆದ್ದ ಉಪಮೇಯರ್ ರಾಜೇಶ್ ಮತ್ತು ಸಿದ್ದು ಯಲ್ಲಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಈ ಎಲ್ಲ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಉಪಮೇಯರ್ ಗುಂಡಾಗಿರಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಯಲ್ಲಪ್ಪ ದೂರು ದಾಖಲಿಸಿದ್ದು, ಗಾಯಾಳು ಯಲ್ಲಪ್ಪ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.