ಬೆಂಗಳೂರು: ಜೂನ್ 12 ರಂದು ಕರ್ನಾಟಕ ಹಾಗೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಬಂದ್ ಮಾಡಲಾಗುವುದು ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಹಿಂದೆ ಏಳು, ಎಂಟು ಬಾರಿ ಬಂದ್ ಮಾಡಲಾಗಿತ್ತು. ಆದರೆ ಆ ಬಂದ್ನಲ್ಲಿ ಯಾವುದೇ ರೀತಿಯ ನಷ್ಟ ಉಂಟಾಗಿಲ್ಲ. ಮಹಾದಾಯಿ, ಕಳಸಬಂಡೂರಿ ಯೋಜನೆ ಆಗ್ರಹಿಸಿ ಮತ್ತು ಬೆಳಗಾವಿ ಎಂಇಎಸ್ ಪುಂಡರ ಹಾವಳಿ ಹತ್ತಿಕ್ಕಲು ಬಂದ್ ಅವಶ್ಯಕತೆ ಇದೆ ಎಂದು ಅವರು ಹೇಳಿದರು.
ನಾಳೆ ದಿನ ಮೆರವಣಿಗೆ ಆಥವಾ ಸತ್ಯಾಗ್ರಹ ಮಾಡಿದ್ರೂ ಕೂಡ ಅದನ್ನೂ ಯಾಕೆ ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ಬೆಂಬಲ ನೀಡದೇ ಇರುವವವರು ಬೆಂಬಲ ನೀಡುವಂತೆ ಮನವಿ ಮಾಡುತ್ತೇವೆ. ಇದು ನಮ್ಮ ಹೋರಾಟ, ಜನರು ಪ್ರೀತಿಯಿಂದ ಬಂದ್ಗೆ ಬೆಂಬಲ ವ್ಯಕ್ತಪಡಿಸಬೇಕು. ಇಂದು ಎಲ್ಲಾ ಮಾಲ್ಗಳಿಗೆ ತೆರಳಿ ಬಂದ್ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ. ಆರ್ ಕುಮಾರ್ ಮಾತನಾಡಿ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಸೇರಿದಂತೆ ಬಯಲು ಸೀಮೆಯಲ್ಲಿ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟ ನಡೆಯುತ್ತಿದೆ. ಮಹಾರಾಷ್ಟ್ರದ ಎಂಇಎಸ್ ಪುಂಡರನ್ನು ಹೊಡೆದು ಓಡಿಸಬೇಕು. ಅಲ್ಲದೇ ರೈತರ ಸಾಲಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸೋಮವಾರ ಬಂದ್ಗೆ ಕರೆ ನೀಡಲಾಗಿದೆ ಎಂದರು.