ಡೆಹ್ರಾಡೂನ್: ಅಪ್ರಾಪ್ತನೊಬ್ಬ ಫೇಸ್ಬುಕ್ ನಲ್ಲಿ ಕೇದಾರನಾಥದ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಆಕ್ರೋಶಗೊಂಡ ಬಜರಂಗದಳ ಕಾರ್ಯಕರ್ತರು ಆತನ ಕುಟುಂಬದ ಅಂಗಡಿಯನ್ನೇ ಭಸ್ಮಗೊಳಿಸಿದ ಘಟನೆ ಉತ್ತರಾಖಂಡ್ನಲ್ಲಿ ನಡೆದಿದೆ.
ಉತ್ತರಾಖಂಡ್ ನ ಗರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸದ್ಯ ಇಲ್ಲಿನ ಪರಿಸ್ಥಿತಿ ಉದ್ವಿಗ್ನವಾಗಿದೆ. ಕೇದರಾನಾಥ ದೇವಾಲಯದ ಬಗ್ಗೆ ಅಪ್ರಾಪ್ತ ಅವಹೇಳನಕಾರಿ ಫೋಟೋವೊಂದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದನು. ಇದರಿಂದ ಆಕ್ರೋಶಗೊಂಡ ಬಜರಂಗದಳ ಕಾರ್ಯಕರ್ತರು ಭಾನುವಾರ ಆತನ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಹಿಂದೂ ಪರ ಘೋಷಣೆಗಳನ್ನು ಕೂಗಿದ್ದಾರೆ.
ಘಟನೆ ಸೂಕ್ಷ್ಮತೆಯನ್ನು ಅರಿತು ಹಿರಿಯ ಪೊಲೀಸ್ ಅಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ದೌಡಾಯಿಸಿದ್ರು. ಪೋಸ್ಟ್ ಹಾಕಿದ ಆರೋಪಿಯನ್ನು ಹಿಡಿದು, ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ವರದಿಗಳ ಪ್ರಕಾರ ಯುವಕ ಕೇದರನಾಥ್ ದೇವಾಲಯದ ಅವಹೇಳನಕಾರಿ ಫೋಟೋದೊಂದಿಗೆ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಬಜರಂಗದಳ ಕಾರ್ಯಕರ್ತರು ಅಂಗಡಿಗೆ ಬೆಂಕಿ ಹಚ್ಚಿದ ನಂತರ ಅಂಗಡಿ ಮಾಲೀಕನಿಗಾಗಿ ಹುಡುಕಾಡುತ್ತಿದ್ದರು. ಆದ್ರೆ ಮಾಲೀಕ ಅಲ್ಲಿಂದ ಪರಾರಿಯಾಗಿದ್ದರು ಎಂದು ಹೇಳಲಾಗಿದೆ. ಅಲ್ಲದೆ ಪ್ರತ್ಯಕ್ಷದರ್ಶಿಯೊಬ್ಬರು ಘಟನೆಯ ವಿಡಿಯೋ ಮಾಡಿದ್ದು, ಆರೋಪಿಯನ್ನು ಬಂಧಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಸೆರೆಹಿಡಿದ ವಿಡಿಯೋದಲ್ಲಿ ಬಜರಂಗ ದಳ ಕಾರ್ಯಕರ್ತರು ಹೇಳಿದ್ದಾರೆ.
ಕಳೆದ ವಾರ ಪಶ್ಚಿಮ ಬಂಗಾಳದಲ್ಲಿ ಪ್ರಾಫೆಟ್ ಮೊಹಮ್ಮದ್ರ ಬಗ್ಗೆ ಯುವಕನೊಬ್ಬ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಕಾರಣ ಭಾರೀ ಪ್ರತಿಭಟನೆ ನಡೆದು ಕೋಮು ಗಲಭೆ ಉಂಟಾಗಿತ್ತು.