ಕಾರವಾರ: ಬೇರೊಬ್ಬ ಮೌಲ್ವಿಯ ಉಪದೇಶವನ್ನು ಆಲಿಸಿದ ಕಾರಣಕ್ಕಾಗಿ ಜಿಲ್ಲೆಯ ಚಿತ್ತಾಕುಲದ ಮಾಲ್ದಾರವಾಡದ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ.
ಗ್ರಾಮದ ಅನ್ವರ್ ಮಹಮದ್ ಖಾನ್, ಅಬ್ದುಲ್ ಸಲಾಂ ಸೇರಿದಂತೆ 12 ಕುಟುಂಬಗಳು ಆಂಧ್ರಪ್ರದೇಶದ ದಾವಲ್-ಅಲಿ-ಶಾಹಾರ್ ಎಂಬ ಮೌಲ್ವಿಯ ಉಪದೇಶವನ್ನ ಕೇಳಿ ಅವರನ್ನು ಅನುಸರಿಸುತ್ತಿದ್ದರು. ಈ ಕಾರಣದಿಂದಾಗಿ ಚಿತ್ತಾಕುಲದ ಮಸೀದಿ ಹಾಗೂ ಮಸೀದಿಯ ಸಮಿತಿ, 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಫತ್ವಾ ಹೊರಡಿಸಿದ್ದಾರೆ. ಬಹಿಷ್ಕಾರಗೊಂಡಿರುವ ಕುಟುಂಬಗಳ ಯಾವುದೇ ಕಾರ್ಯಕ್ರಮಗಳಿಗೆ ಸಂಬಂಧಿಕರು ತೆರಳದಂತೆ ಫತ್ವಾ ಹೊರಡಿಸಲಾಗಿದೆ.
ಇದೇ ತಿಂಗಳ 21 ರಂದು ಅಬ್ದುಲ್ ಸಲಾಂ ಎಂಬ ಯುವಕನ ವಿವಾಹ ಮಹೋತ್ಸವವಿದ್ದು, ಮಸೀದಿಯಿಂದ ಮದುವೆಗೆ ಒಪ್ಪಿಗೆ ಪತ್ರ ನೀಡದ ಹಿನ್ನೆಲೆಯಲ್ಲಿ ಮದುವೆ ಮುರಿದು ಬೀಳುವ ಹಂತಕ್ಕೆ ಬಂದಿದೆ. ಇನ್ನು ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದು, ಅವರ ಸೂಚನೆಗಳಿದ್ದರೂ ಮಸೀದಿಯವರು ಮಾತ್ರ ತಮ್ಮ ಫತ್ವಾವನ್ನು ಹಿಂದೆ ತೆಗೆದುಕೊಂಡಿಲ್ಲ. ಆಂಧ್ರ ಮೂಲದ ಮೌಲ್ವಿಯನ್ನು ಅನುಸರಿಸದೇ ತಪ್ಪೋಪ್ಪಿಗೆ ಪತ್ರ ನೀಡಿದಲ್ಲಿ ಮಾತ್ರ ಫತ್ವಾ ಹಿಂಪಡೆಯುವ ಸಂದೇಶ ನೀಡಿದ್ದಾರೆ.