ಲಕ್ನೌ: ಸೆಪ್ಟೆಂಬರ್ 21 ಇದೇ ಗುರುವಾರದಿಂದ ನವರಾತ್ರಿ ಹಬ್ಬ ಆರಂಭವಾಗಲಿದೆ. ಇದೇ ಹೊತ್ತಲ್ಲಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ದುರ್ಗಾ ಪೂಜೆ, ದಸರಾ ಹಾಗೂ ಮೊಹರಂ ಆಚರಣೆಗೆ ಹಲವು ಷರತ್ತುಗಳನ್ನ ವಿಧಿಸಿದೆ.
ದುರ್ಗಾ ಪೂಜೆ ಮೆರವಣಿಗೆ ವೇಳೆ ದುರ್ಗಾ ಮಾತೆಯ ಮೂರ್ತಿ ಹಾಗೂ ಮೊಹರಂನ ಮೆರವಣಿಗೆ ವೇಳೆ ಹೊತ್ತೊಯ್ಯಲಾಗುವ ತಝಿಯಾಗಳು ಇಷ್ಟೇ ಎತ್ತರ ಇರಬೇಕೆಂದು ನಿರ್ಬಂಧ ಹೇರಲಾಗಿದೆ. ಹಾಗೂ ಡಿಜೆ(ಹಾಡು-ನೃತ್ಯಕ್ಕೂ) ನಿಷೇಧ ಹೇರಿದ್ದಾರೆ. ಧ್ವನಿವರ್ಧಕಗಳ ಬಳಕೆಗೆ ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಮೊದಲೇ ನಿಗದಿಪಡಿಸಿದ ಮಾರ್ಗ ಹೊರತುಪಡಿಸಿ ಬೇರೆ ಮಾರ್ಗದಲ್ಲಿ ಮೆರವಣಿಗೆ ಸಾಗುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ.
ಸೆಪ್ಟೆಂಬರ್ 26 ರಂದು 4 ದಿನಗಳ ಕಾಲ ದುರ್ಗಾ ಪೂಜೆ ನಡೆಯಲಿದೆ. ಸೆಪ್ಟೆಂಬರ್ 30 ರಂದು ವಿಜಯದಶಮಿ ಆಚರಿಸಲಾಗುತ್ತದೆ. ಹಾಗೇ ಆಕ್ಟೋಬರ್ 1ರಂದು ಮೊಹರಂ ಇದೆ. ಧ್ವನಿ ವರ್ಧಕಗಳ ಬಳಕೆ ಹಾಗೂ ಮೆರವಣಿಗೆ ಹೋಗುವ ಮಾರ್ಗದ ವಿಚಾರವಾಗಿ ಈ ಹಿಂದೆ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಾಟೆ ಆದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಆ ಘಟನೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ದುರ್ಗಾ ಮಾತೆಯ ಮೆರವಣಿಗೆ ಹಾಗೂ ಮೊಹರಂ ಮೆರವಣಿಗೆ ಸಾಗುವ ಮಾರ್ಗವನ್ನು ರಾಜ್ಯ ಸರ್ಕಾರವೇ ನಿರ್ಧರಿಸಲಿದೆ.
ದಸರಾ ಹಬ್ಬ ಕೊನೆಯಾದ ಮಾರನೇ ದಿನವೇ ಮೊಹರಂ ಇರೋದು ವಿಶೇಷ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡೋ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ.