ಬೆಳಗಾವಿ: ಅಪರಿಚಿತ ವಾಹನದಲ್ಲಿ ಮಹಿಳೆಯರು ಬಂದು ಶಾಲಾ ಮಕ್ಕಳಿಗೆ ಹಣ ಹಾಗೂ ಚಾಕ್ಲೇಟ್ ನೀಡಿ ಹೋಗುತ್ತಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಸಮೀಪದ ಚಿಂಚಲಿ ತೋಟದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಶಾಲಾ ಮಕ್ಕಳು, ಪಾಲಕರು ಹಾಗೂ ಶಾಲಾ ಸಿಬ್ಬಂದಿಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮಹಾರಾಷ್ಟ್ರ ನೊಂದಣಿಯ ಓಮಿನಿ ವಾಹನದಲ್ಲಿ ಬರುತ್ತಿರುವ ಓರ್ವ ಚಾಲಕ ಹಾಗೂ ಇಬ್ಬರು ಮಹಿಳೆಯರು ಶಾಲಾ ಮಕ್ಕಳಿಗೆ ಚಿಲ್ಲರೆ ಹಣ ಹಾಗೂ ಚಾಕಲೇಟ್ ನೀಡಿ ಹೋಗುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಇವರು ಮಕ್ಕಳ ಕಳ್ಳರಿರಬಹುದು ಎಂಬ ಭಯ ಪಾಲಕರು ಹಾಗೂ ಶಿಕ್ಷಕರಲ್ಲಿ ಮೂಡಿದ್ದು, ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಒಂದೆರಡು ದಿನ ಪೊಲೀಸರು ಬಂದು ಪರಿಶೀಲನೆ ನಡೆಸಿದ ಹೋದ ಮೇಲೆ ಮತ್ತೊಮ್ಮೆ ಈ ವಾಹನ ಹಾಗೂ ಮಹೊಳೆಯರು ಕಂಡಿದ್ದು ಮತ್ತಷ್ಟು ಭಯ ಮೂಡಿಸಿದೆ.
ಯಾರೇ ಆಮಿಷ ತೋರಿದರೂ ಅವರ ಬಳಿ ಹೋಗದಂತೆ ಮಕ್ಕಳಿಗೆ ಶಾಲಾ ಶಿಕ್ಷಕರು ಹಾಗೂ ಪೊಷಕರು ತಿಳುವಳಿಕೆ ನೀಡಿದ್ದಾರೆ. ರಾಯಬಾಗ ತಾಲೂಕಿನ ತೋಟದ ಎರಡು ಮೂರು ಶಾಲೆಗಳಲ್ಲಿ ಇಂಥ ಘಟನೆಗಳು ಸಂಭವಿಸಿದೆ. ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಅನಾಮಧೇಯ ವ್ಯಕ್ತಿಗಳಾರು ಎಂಬುದನ್ನು ಕಂಡು ಹಿಡಿಯಬೇಕಿದೆ.