ನವದೆಹಲಿ: ನವೆಂಬರ್ 8 ರಂದು 500, 1 ಸಾವಿರ ರೂ ಮುಖಬೆಲೆಯ ನೋಟುಗಳನ್ನು ನಿಷೇಧಿಸಿ ಬಿಗ್ ಶಾಕ್ ನೀಡಿದ ಸರ್ಕಾರ ಈಗ ರಾಜಕೀಯ ಪಕ್ಷಗಳಿಗೆ ಮತ್ತೊಂದು ಶಾಕ್ ನೀಡಿದೆ. ಬೇನಾಮಿಯಾಗಿ ವ್ಯಕ್ತಿಯೊಬ್ಬ ಗರಿಷ್ಠ 2 ಸಾವಿರ ರೂ. ಹಣವನ್ನು ದೇಣಿಗೆಯಾಗಿ ರಾಜಕೀಯ ಪಕ್ಷಗಳಿಗೆ ನೀಡಬಹುದು ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.
2 ಸಾವಿರ ರೂ.ಗಿಂತ ಹೆಚ್ಚಿನ ಹಣವನ್ನು ಡಿಜಿಟಲ್ ಪಾವತಿ, ಡಿಡಿ ಚೆಕ್ ಮೂಲಕ ನೀಡಬೇಕು ಎನ್ನುವ ಪ್ರಸ್ತಾಪವನ್ನು ಜೇಟ್ಲಿ ಬಜೆಟ್ನಲ್ಲಿ ಮಂಡಿಸಿದ್ದಾರೆ. ಅಷ್ಟೇ ಅಲ್ಲದೇ ಹಣ ನೀಡಿದ ವ್ಯಕ್ತಿಗಳ ವಿವರವನ್ನು ಬಹಿರಂಗಪಡಿಸಬೇಕು ಎಂದು ಹೇಳಿದ್ದಾರೆ.
ರಾಜಕೀಯ ಪಕ್ಷಗಳ ನಿಧಿ ಸೇರುವ ಬೇನಾಮಿ ದೇಣಿಗೆ ನಿಯಂತ್ರಣಕ್ಕೆ ಸದ್ಯ ಯಾವುದೇ ನಿಯಮಗಳಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 29ಸಿ ಪ್ರಕಾರ ರಾಜಕೀಯ ಪಕ್ಷಗಳ ನಿಧಿಗೆ ನೀಡುವ ಬೇನಾಮಿ ದೇಣಿಗೆಯ ಘೋಷಣೆ ಮಾಡುವುದು ಕಡ್ಡಾಯ. ಇಲ್ಲಿಯವರೆಗೆ 20,000ಕ್ಕಿಂತ ಹೆಚ್ಚಿನ ದೇಣಿಗೆಗೆ ಮಾತ್ರ ಈ ನಿಯಮ ಅನ್ವಯವಾಗುತಿತ್ತು. ಹೀಗಾಗಿ ರಾಜಕೀಯ ಪಕ್ಷಗಳ ನಿಧಿ ಸೇರುವ ಬೇನಾಮಿ ದೇಣಿಗೆಯ ಮೇಲೆ ನಿಷೇಧ ಹೇರುವ ನಿಯಮ ಜಾರಿಗೆ ತರುವಂತೆ ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು.
ಭಾರತದ ಏಳು ರಾಜಕೀಯ ಪಕ್ಷಗಳು 2015-2016ರ ಅವಧಿಯಲ್ಲಿ 1,744 ಮಂದಿಯಿಂದ ದೇಣಿಗೆ ಪಡೆದಿದ್ದು, ಒಟ್ಟು 102.02 ಕೋಟಿ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾಮ್ರ್ಸ್ (ಎಡಿಆರ್) ಈ ಹಿಂದೆ ತಿಳಿಸಿತ್ತು.
ರಾಜಕೀಯ ಪಕ್ಷಗಳನ್ನು ಆರ್ಟಿಐ ಅಡಿ ತರಬೇಕು ಎನ್ನುವ ಕೂಗು ಬಹಳ ದಿನಗಳಿಂದ ಬಂದಿದ್ದರೂ ಪಕ್ಷಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈಗ ಈ ಹೊಸ ಪ್ರಸ್ತಾಪಕ್ಕೆ ರಾಜಕೀಯ ಪಕ್ಷಗಳು ಯಾವ ರೀತಿ ಪ್ರತಿಕ್ರಿಯಿಸುತ್ತವೆ ಎನ್ನುವ ಕುತೂಹಲ ಹೆಚ್ಚಾಗಿದೆ.