ಬೆಳಗಾವಿ: ಗೋಕಾಕ್ ತಾಲೂಕಿನ ಮಮದಾಪುರದಲ್ಲಿ ಕೊಲೆಯನ್ನು ಆತ್ಮಹತ್ಯೆ ಎಂದು ಬಿಂಬಿಸಲು ಶವವನ್ನು ರೈಲ್ವೇ ಹಳಿ ಮೇಲೆ ಬಿಸಾಡಿದ್ದ ಪ್ರಕರಣವನ್ನು ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದಾರೆ. ತನ್ನ ಅನೈತಿಕ ಸಂಬಂಧ ಅಡ್ಡಿಪಡಿಸಿದಕ್ಕೆ ಪತಿಯನ್ನೆ ಪತ್ನಿ ಕೊಲ್ಲಿಸಿದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.
ಪರಸಪ್ಪ ಮ್ಯಾಳೆಗೋಳ ಪತ್ನಿಯಿಂದಲೇ ಕೊಲೆಗೀಡಾದ ದುರ್ದೈವಿ. ಪರಸ್ಪರ ಪತ್ನಿ ಪಾರ್ವತಿ ಗ್ರಾಮದ ಮಾರುತಿ ಬೆಕ್ಕೆರಿ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ಮನೆಯಲ್ಲಿ ಗಂಡ-ಹೆಂಡತಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು. ಪಾರ್ವತಿ ಆಗಲೇ ತನ್ನ ಗಂಡನಿಗೆ ಗತಿ ಕಾಣಿಸಿಬೇಕೆಂದು ಪ್ರಿಯತಮ ಮಾರುತಿ ಜೊತೆ ಸೇರಿ ಮಾಸ್ಟರ್ ಪ್ಲಾನ್ ಮಾಡಿದ್ದಾಳೆ.
ಏನದು ಮಾಸ್ಟರ್ ಪ್ಲಾನ್?:
ಜನವರಿ 21 ರಂದು ಪರಸಪ್ಪನನ್ನು ಪಾರ್ವತಿಯ ಪ್ರಿಯಕರ ಮಾರುತಿ ಹಾಗೂ ಸ್ನೇಹಿತರು ಕರೆದುಕೊಂಡು ಹೋಗಿ ಕಂಠಪೂರ್ತಿ ಕುಡಿಸುತ್ತಾರೆ. ನಂತರ ಚಿಕ್ಕೋಡಿ ರೈಲ್ವೆ ಗೇಟ್ನ ಹತ್ತಿರ ಕರೆದುಕೊಂಡು ಬಂದು ಕಲ್ಲಿನಿಂದ ತಲೆಗೆ ಜಜ್ಜಿ ಕೊಲೆ ಮಾಡುತ್ತಾರೆ. ನಂತರ ಕೊಲೆಯನ್ನು ಮುಚ್ಚಿಹಾಕಲು ಆತ್ಮಹತ್ಯೆ ಮಾಡಿಕೊಂಡಿರುವ ರೀತಿಯಲ್ಲಿ ಶವವನ್ನು ರೈಲು ಹಳಿಗಳ ಮೇಲೆ ಬಿಸಾಡಿ ಹೋಗುತ್ತಾರೆ.
ಸಂಶಯ ಮೂಡಿದ್ದು ಹೇಗೆ?
ಪರಸಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಲ್ಲಡೆ ಸುದ್ದಿ ಆಗುತ್ತದೆ. ಆದರೆ ಮೃತ ಪರಸಪ್ಪರ ಸೋದರನ ಮಗ ದುಂಡಪ್ಪ ಮಾತ್ರ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಸಂಶಯ ವ್ಯಕ್ತಪಡಿಸಿ ಜನವರ 27ರಂದು ರೈಲ್ವೆ ಪೊಲೀಸರಿಗೆ ದೂರು ನೀಡುತ್ತಾರೆ. ಪೊಲೀಸರಿಗೂ ಸಹ ಅಸಹಜ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿರುತ್ತದೆ. ಸತ್ತಾಗ ಬಿದ್ದ ರಕ್ತದ ಕಲೆ, ಚಪ್ಪಲಿ ಹಾಗೂ ಮೃತ ದೇಹ ಬಿದ್ದಿರುವ ಸ್ಥಿತಿಯನ್ನು ಕಂಡು ಪೊಲೀಸರು ಸಹ ಇದೊಂದು ಕೊಲೆ ಎನ್ನುವ ತೀರ್ಮಾನಕ್ಕೆ ಬಂದು ತನಿಖೆ ಆರಂಭಿಸುತ್ತಾರೆ.
ಆರೋಪಿಗಳು ಸೆರೆಯಾಗಿದ್ದು ಹೇಗೆ?
ಕೊಲೆ ನಡೆದ ಸ್ಥಳದ ಟವರ್ ಮಾಹಿತಿಯನ್ನು ಕಲೆ ಹಾಕಿದಾಗ ಪೊಲೀಸರಿಗೆ ಆರೋಪಿ ಮಾರುತಿ ಬೆಕ್ಕೇರಿ ಫೋನ್ ನಂಬರ್ ಸಿಗುತ್ತದೆ. ಅಷ್ಟೇ ಅಲ್ಲ ಮಾರುತಿ ಜತೆಗೆ ಮೃತನ ಹೆಂಡತಿ ಪಾರ್ವತಿ ನಿರಂತರ ಸಂಪರ್ಕದಲ್ಲಿರುವುದು ಪೊಲೀಸರಿಗೆ ಗೊತ್ತಾಗುತ್ತದೆ. ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿದಾಗಿ ಕೊಲೆ ಮಾಡಿರುವುದು ತಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪರಸಪ್ಪ ಪತ್ನಿ ಪಾರ್ವತಿ, ಪ್ರಿಯಕರ ಮಾರುತಿ ಬೆಕ್ಕರಿ ಮತ್ತು ಕೊಲೆಗೆ ಸಹಾಯ ಮಾಡಿದ್ದ ದುಂಡಪ್ಪ ಗೋಟುರು ಮೂವರನ್ನು ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.