ಗದಗ: ಮನೆ ಮುಂದಿನ ಜಾಗದ ವಿಷಯವಾಗಿ ಎರಡು ಕುಟುಂಬಗಳ ನಡುವೆ ನಡೆದ ಹೊಡೆದಾಟದಲ್ಲಿ ಗರ್ಭಿಣಿ ಹೊಟ್ಟೆಗೆ ಪೆಟ್ಟು ಬಿದ್ದ ಘಟನೆ ನಡೆದಿದೆ.
ಈ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದಲ್ಲಿ ನಡೆದಿದೆ. ಗಲಾಟೆಯಲ್ಲಿ ಮೂರು ತಿಂಗಳು ಗರ್ಭಿಣಿ ಜ್ಯೋತಿ ರಾಠೋಡ್ಗೆ ಪೆಟ್ಟು ಬಿದ್ದಿದ್ದು, ಸದ್ಯ ಗರ್ಭಿಣಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ.
ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸ್ಕ್ಯಾನಿಂಗ್ ಮಾಡಿಸುವಂತೆ ಬೇಡಿಕೊಂಡರೂ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಇದ್ರಿಂದ ಮೂರ್ನಾಲ್ಕು ಗಂಟೆ ಜ್ಯೋತಿ ಯಾತನೆ ಅನುಭವಿಸುವಂತಾಗಿಯಿತು ಅಂತಾ ಆರೋಪ ವ್ಯಕ್ತವಾಗಿದೆ.
ಈ ಬಗ್ಗೆ ಜ್ಯೋತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಜಾಗದ ವಿಷಯದಲ್ಲಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನಡೆದಿದ್ದು, ಚಾಕು, ಚೂರಿ ತಗೊಂಡು ಬೆದರಿಸಿದ್ರು. ಕಾಲಲ್ಲಿ ಒದ್ದರು. ಇನ್ನೂ ಹೊಟ್ಟೆ ನೋವು ಇದೆ. ಸದ್ಯ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಕೊಟ್ಟಿದ್ದಾರೆ ಹೊರತು ಸ್ಕ್ಯಾನಿಂಗ್ ಮಾಡಿಲ್ಲ, ಜಾಸ್ತಿ ಮಾತಾಡಿದ್ರೆ ಹೊಟ್ಟೆ ನೋವಾಗುತ್ತೆ ಅಂತಾ ಹೇಳಿದ್ದಾರೆ.
ಈ ಬಗ್ಗೆ ಡ್ಯೂಟಿ ಡಾಕ್ಟರ್ ಬಸವರಾಜ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ಅವರಿಗೆ ಎಮೆರ್ಜೆನ್ಸಿ ಇಲ್ಲ. ಅಂತಹ ಸಂದರ್ಭದಲ್ಲಿ ನಾವು ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತೇವೆ ಅಂತಾ ಹೇಳಿದ್ದಾರೆ.