ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನ ಬಳಿ 22 ನಂಬರ್ನ ಎರಡು ಸಜೀವ ಗುಂಡುಗಳು ಪತ್ತೆಯಾಗಿದ್ದು, ಆರೋಪಿಯನ್ನು ಏರ್ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.
ಬಾದೆ ದಾನೇಶ್ವರ್ ಎಂಬಾತ ಬಂಧಿತ ಆರೋಪಿ. ಈತ ನವೆಂಬರ್ 2 ರಂದು ಕೆಐಎಎಲ್ನಿಂದ ಪುಣೆಗೆ ಸ್ಪೈಸ್ ಜೆಟ್ ವಿಮಾನ ಸಂಖ್ಯೆ ಎಸ್ಜಿ 424ನಲ್ಲಿ ಪ್ರಯಾಣ ಮಾಡಲು ಯತ್ನಿಸಿದ್ದನು. ಈ ಸಂದರ್ಭದಲ್ಲಿ ನಿರ್ಬಂಧಿತ ಪ್ರದೇಶದಲ್ಲಿ ಹ್ಯಾಂಡ್ ಬ್ಯಾಗ್ ಮುಖಾಂತರ ಗುಂಡುಗಳನ್ನು ಕೊಂಡೊಯ್ಯುತ್ತಿದ್ದನು. ತಪಾಸಣೆ ಮಾಡುವ ವೇಳೆ ಅಕ್ರಮ ಗುಂಡುಗಳು ಹಾಗೂ ಕಾಟ್ರಿಡ್ಜ್ ಪತ್ತೆಯಾಗಿವೆ.
ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುವ ಸಂದರ್ಭದಲ್ಲಿ ಆರೋಪಿ ಬಳಿ 22 ನಂಬರ್ನ ಎರಡು ಖಾಲಿ ಕಾಟ್ರಿಡ್ಜ್ ಹಾಗೂ 5.56 ನಂಬರ್ನ ಒಂದು ಹೆಡ್ ಪಾರ್ಟ್ ಪತ್ತೆಯಾಗಿವೆ. ಆದರೆ ವಿಚಾರಣೆಯ ವೇಳೆ ಬೇರೆ ಯಾವುದೇ ರೀತಿಯ ದಾಖಲಾತಿಗಳು ದೊರಕಲಿಲ್ಲ.
ಈ ಘಟನೆ ಸಂಬಂಧ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.