ನವದೆಹಲಿ: ಇಬ್ಬರು ಅಪರಿಚಿತ ಬಂದೂಕುದಾರಿಗಳು ಗಳು ಪತ್ರಕರ್ತನಿಗೆ ಮನೆಯೊಳಗಡೆಯೇ ಗುಂಡಿಕ್ಕಿದ ಆಘಾತಕಾರಿ ಘಟನೆ ನಡೆದಿದೆ.
ಈ ಘಟನೆ ಭಾನುವಾರ ಸಂಜೆ ನವದೆಹಲಿ ಸಮೀಪದ ಗಾಜಿಯಾಬಾದ್ ನಲ್ಲಿ ನಡೆದಿದೆ. ದುಷ್ಕರ್ಮಿಗಳ ದಾಳಿಗೊಳಗಾದ ಪತ್ರಕರ್ತನನ್ನು ಅನೂಜ್ ಚೌಧರಿ ಎಂದು ಗುರುತಿಸಲಾಗಿದೆ.
ಘಟನೆ ವಿವರ: ರಾಜ್ಪುರ್ ಗ್ರಾಮಕ್ಕೆ ತೆರಳಿದ್ದ ಚೌಧರಿ ಅವರು ಆಗಷ್ಟೇ ಮನೆಗೆ ಹಿಂದಿರುಗಿದ್ದರು. ಈ ವೇಳೆ ಇಬ್ಬರು ಬಂದೂಕುದಾರಿಗಳು ಅವರನ್ನು ಹಿಂಬಾಲಿಸಿದ್ದಾರೆ. ಮುಖಕ್ಕೆ ಹೆಲ್ಮೆಟ್ ಹಾಕಿದ್ದ ಗನ್ ಮ್ಯಾನ್ ಗಳು ಏಕಾಏಕಿ ಚೌಧರಿ ಮನೆಯೊಳಗೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ ಚೌಧರಿ ಅವರ ಬಲ ಗೈ ಮತ್ತು ಹೊಟ್ಟೆಗೆ ಗಂಭೀರ ಗಾಯಗಳಾಗಿದೆ ಕುಸಿದು ಬಿದ್ದಿದ್ದಾರೆ. ಕೂಡಲೇ ಸಂಬಂಧಿಕರು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚೌಧರಿ ಮನೆಯವರು ಆರೋಪಿಗಳನ್ನು ಗುರುತಿಸಿದ್ದಾರೆ. ಆದ್ರೆ ಇದೂವರೆಗೂ ಈ ಕುರಿತು ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಚೌಧರಿ ಅವರು ಬಿಎಸ್ಪಿ ಕೌನ್ಸಿಲರ ಪತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಹಳೆಯ ದ್ವೇಷದಿಂದ ದುಷ್ಕರ್ಮಿಗಳು ಹತ್ಯೆ ಮಾಡಿರುವ ಸಾಧ್ಯತೆಗಳಿವೆ ಅಂತಾ ಹಿರಿಯ ಪೊಲೀಸ್ ಅಧಿಕಾರಿ ವೈಭವ್ ಕೃಷ್ಣ ಶಂಕಿಸಿದ್ದಾರೆ. ಸದ್ಯ ಘಟನೆ ಸಂಬಂಧ ವಿವಿಧ ರೀತಿಯಲ್ಲಿ ತನಿಖೆ ನಡೆಸಲೆಂದು ವಿಶೇಷ ತಂಡಗಳನ್ನು ರಚಿಸಲಾಗಿದೆ ಅಂತ ಅವರು ವಿವರಿಸಿದ್ರು.
ಹಿಂದಿ ನ್ಯೂಸ್ ಚಾನೆಲ್ ಒಂದರಲ್ಲಿ ಪತ್ರಕರ್ತರಾಗಿರೋ ಚೌಧರಿ ಆರೋಗ್ಯ ಸದ್ಯ ಸುಧಾರಿಸಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.