ತೂಮಕೂರು: ವರ್ಗಾವಣೆ ಪತ್ರ ಕೇಳಿದಕ್ಕೆ ವಿದ್ಯಾರ್ಥಿನಿ ಮೇಲೆ ಕಾಲೇಜು ಸಿಬ್ಬಂದಿ ಆಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ತುಮಕೂರು ನಗರದ ವಿವೇಕಾನಂದ ಕಾಮರ್ಸ್ ಕಾಲೇಜಿನಲ್ಲಿ ನಡೆದಿದೆ.
ರಂಜಿತಾ(ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿನಿ ಮೇಲೆ, ಕಾಲೇಜು ಮುಖ್ಯಸ್ಥರ ಕಾರು ಚಾಲಕ ಯದುಕುಮಾರ್ ಅವಾಚ್ಯ ಶಬ್ಧಗಳಿಂದ ಅವಹೇಳನ ಮಾಡಿ ಹಲ್ಲೆ ನಡೆಸಿದ್ದಾನೆ.
ಎಂಕಾಂ ಮೊದಲ ವರ್ಷ ಪೂರೈಸಿದ ವಿದ್ಯಾರ್ಥಿನಿ ರಂಜಿತಾ ದ್ವಿತೀಯ ವರ್ಷದ ವ್ಯಾಸಾಂಗಕ್ಕಾಗಿ ಬೇರೆ ಕಾಲೇಜಿಗೆ ಹೋಗಲು ನಿರ್ಧರಿಸಿದ್ದಳು. ಈ ಕಾರಣಕ್ಕೆ ಪ್ರಾಂಶುಪಾಲರಾಗಿರುವ ಸುಮಾ ಅವರ ಬಳಿ ವರ್ಗಾವಣೆ ಪತ್ರವನ್ನು ನೀಡುವಂತೆ ಕೇಳಿದ್ದಾಳೆ.
ಈ ವೇಳೆ ಪಕ್ಕದಲ್ಲಿದ್ದ ಕಾರು ಚಾಲಕ ಯದುಕುಮಾರ್ ವಿದ್ಯಾರ್ಥಿನಿಗೆ ಅಶ್ಲೀಲವಾಗಿ ಬೈದಿದ್ದಾನೆ. ಹಾಗಾಗಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದು ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದಿದೆ. ಹಲ್ಲೆ ನಡೆದ ಬಳಿಕ ರಶ್ಮಿ ಪೋಷಕರ ಜೊತೆ ಕಾಲೇಜಿಗೆ ಬಂದು ಪ್ರಶ್ನೆ ಮಾಡಿದ್ದಾಳೆ.
ಪರಿಣಾಮವಾಗಿ ಕಾಲೇಜು ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜಿನ ಮುಖ್ಯಸ್ಥ ಬಿಜೆಪಿ ಮುಖಂಡರಾದ ಬ್ಯಾಟರಂಗೇಗೌಡರು ರಾಜಿ ಸಂಧಾನ ನಡೆಸಿ, ಕಾರು ಚಾಲಕನಿಂದ ವಿದ್ಯಾರ್ಥಿನಿಗೆ ಕ್ಷಮೆ ಕೇಳಿಸಿ ಆ ಜಗಳವನ್ನು ಮುಗಿಸಿದರು.