ಹಾಸನ: ಕಾರೊಂದು ರೈಲ್ವೆ ಗೇಟ್ ದಾಟುವ ವೇಳೆ ರೈಲ್ವೇ ಎಂಜಿನ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಬಳಿ ನಡೆದಿದೆ.
ದುದ್ದ ಗ್ರಾಮದ ನಿವಾಸಿಗಳಾದ ಆನಂದ್ (22) ಮತ್ತು ರಾಘವೇಂದ್ರ (28) ಮೃತ ದುರ್ದೈವಿಗಳು. ಮಂಗಳವಾರ ರಾತ್ರಿ ಸುಮಾರು 11 ಗಂಟೆಗೆ ಇಬ್ಬರೂ ಅರಸೀಕೆರೆದಿಂದ ಕೋರವಂಗಲ್ ಗ್ರಾಮಕ್ಕೆ ತೆರಳುತ್ತಿದ್ದರು. ಈ ವೇಳೆ ಕಾವಲುಗಾರನಿಲ್ಲದ ರೈಲ್ವೇ ಗೇಟ್ ದಾಟುವಾಗ ಅಪಘಾತ ನಡೆದಿದೆ.
ವೇಗವಾಗಿ ಬಂದ ರೈಲ್ವೇ ಎಂಜಿನ್ ಕಾರಿಗೆ ಡಿಕ್ಕಿ ಹೊಡೆದು ಸುಮಾರು 500 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಕೊನೆಗೆ ರೈಲ್ವೇ ಪೊಲೀಸರು ಸಾರ್ವಜನಿಕರ ಸಹಾಯದೊಂದಿಗೆ ಕಾರನ್ನು ಎಂಜಿನ್ನಿಂದ ಬೇರ್ಪಡಿಸಿದ್ದಾರೆ. ಈ ಕುರಿತು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.