ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ ನೌಕರರು ಆಹೋರಾತ್ರಿ ಧರಣಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಬೆಂಗಳೂರು ಟ್ರಾಫಿಕ್ ಜಾಮ್ಗೆ ಸಾಕ್ಷಿಯಾಗಿದೆ.
ಮೆಜೆಸ್ಟಿಕ್ ಸುತ್ತಮುತ್ತ ಭಾರೀ ಪ್ರಮಾಣದ ವಾಹನ ದಟ್ಟಣೆ ಉಂಟಾಗಿದೆ. ಒಕುಳಿಪುರಂ, ರಾಜಾಜಿನಗರ ಎಂಟ್ರೆಂನ್ಸ್, ಆನಂದರಾವ್ ವೃತ್ತ, ಶೇಷಾದ್ರಿ ರಸ್ತೆ, ಶಿವಾನಂದ ವೃತ್ತ, ಪ್ಯಾಲೇಸ್ ರಸ್ತೆ, ಕೆ.ಜಿ ರೋಡ್, ಕಾರ್ಪೋರೇಷನ್, ಮಲ್ಲೇಶ್ವರಂ, ರೇಸ್ಕೋರ್ಸ್ ರಸ್ತೆ, ಚಾಲುಕ್ಯ ಸರ್ಕಲ್, ಕೃಷ್ಣ ಫ್ಲೋರ್ ಮಿಲ್ ಜಂಕ್ಷನ್ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ಬೆಳ್ಳಂಬೆಳಗ್ಗೆ ಹೈರಾಣಾಗಿದ್ದಾರೆ. ಸೂಕ್ತ ಬದಲಿ ಮತ್ತು ಪರ್ಯಾಯ ಮಾರ್ಗಗಳಿಲ್ಲದೇ ವಾಹನ ಸವಾರರು ತತ್ತರಿಸಿದ್ದಾರೆ.
ಅಂಗನವಾಡಿ ನೌಕರರು ವೇತನ ಹೆಚ್ಚಳ ಮತ್ತು ವಿವಿಧ ಬೇಡಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಸೋಮವಾರ ಪ್ರತಿಭಟನೆ ಹಮ್ಮಿಕೊಂಡಿದ್ದರು. ಬಜೆಟ್ನಲ್ಲಿ ಅಂಗನಾವಡಿ ಕಾರ್ಯಕರ್ತೆಯರಿಗೆ ನಾಲ್ಕು ಸಾವಿರ ರೂಪಾಯಿ ಭತ್ಯೆ ಹೆಚ್ಚಿಸುವ ಭರವಸೆ ನೀಡಿ ಕೇವಲ ಒಂದು ಸಾವಿರ ಏರಿಸಿರೋದನ್ನ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇವರ ಬೇಡಿಕೆಗೆ ಸರ್ಕಾರ ಸ್ಪಂದಿಸದ ಕಾರಣ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ನಗರದ ಫ್ರೀಡಂಪಾರ್ಕ್ನ ಮುಖ್ಯ ರಸ್ತೆಯ ಮೇಲೆ ಮಲಗಿ ಇಡೀ ರಾತ್ರಿ ಕಳೆದಿದ್ದಾರೆ. ಕೆಲವರಂತೂ ತಮ್ಮ ಮಕ್ಕಳ ಜೊತೆಯೇ ರಸ್ತೆಯ ಮೇಲೆ ಮಲಗಿರೋ ದೃಶ್ಯ ಕಂಡು ಬಂತು.