ಮಂಡ್ಯ: ಕನ್ನಡ ನಾಮಫಲಕ ಹಾಕದೇ ಇರೋ ಅಂಗಡಿ ಮಾಲೀಕನನ್ನು ಪ್ರವಾಸಿಗರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯದಲ್ಲಿ ನಡೆದಿದ್ದು ಈಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಭಾನುವಾರ ಪ್ರವಾಸಿಗರು ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ವಿಶ್ವವಿಖ್ಯಾತ ಕೆಆರ್ಎಸ್ ಬೃಂದಾವನಕ್ಕೆ ಬಂದಿದ್ದರು. ತೋಟಗಾರಿಕೆ ಇಲಾಖೆಯಿಂದ ಗುತ್ತಿಗೆ ಪಡೆದು ನಡೆಸುತ್ತಿರುವ ಹಣ್ಣಿನ ಅಂಗಡಿಗೆ ಹೋಗಿದ್ದರು. ಈ ವೇಳೆ ಅಂಗಡಿಯಲ್ಲಿ ಕನ್ನಡ ನಾಮಫಲಕ ಹಾಕದೇ ಇರೋದನ್ನ ಗಮನಿಸಿ ವಿಡಿಯೋ ಮಾಡಲು ಮುಂದಾಗಿದ್ದರು.
ಮಂಡ್ಯದಂತಹ ಅಪ್ಪಟ ಕನ್ನಡ ಪ್ರೇಮಿಗಳ ನೆಲದಲ್ಲಿ ಕನ್ನಡ ನಾಮಫಲಕ ಹಾಕಿಲ್ಲವಲ್ಲ ಎಂದು ಮೊಬೈಲ್ನಲ್ಲಿ ಚಿತ್ರೀಕರಿಸಲು ಮುಂದಾದಾಗ ಇದಕ್ಕೆ ಒಪ್ಪದ ಅಂಗಡಿ ಮಾಲೀಕ ಮಹದೇವ್ ಪ್ರಶ್ನೆ ಮಾಡಿದ ಪ್ರವಾಸಿಗರೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಬೇಕಾದರೆ ದೂರು ಕೊಡಿ ಅಂತಾ ಜವಾಬು ನೀಡಿದ್ದಾನೆ. ಇದಕ್ಕೆ ಪ್ರವಾಸಿಗರು ಕೂಡ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡ ವಿರೋಧಿ ಅಂಗಡಿ ಮಾಲೀಕನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
https://youtu.be/Yu9vhEPPfQM