ಬೆಂಗಳೂರು: ನಾನು ಇದುವರೆಗೆ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನಗೆ ಯಾವ ಆಸೆಗಳೂ ಇಲ್ಲ. ಇದು ನನಗೆ ಬಯಸದೇ ಬಂದ ಭಾಗ್ಯ. ರಾಯರನ್ನು ನಂಬಿದ್ದಕ್ಕೆ ವರ ಸಿಕ್ಕಿದೆ ಎಂದು ನಟ, ಬಿಜೆಪಿ ನಾಯಕ ಜಗ್ಗೇಶ್ ಹೇಳಿದ್ದಾರೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ನಾಳೆ ನಂಬಿದವನು ಮೇಧಾವಿ. ಇಂದು ನಂಬಿದವನು ಮನುಷ್ಯ. ನಾನು ಮೊದಲು ಹೀರೋ ಆಗಿ ಫಿಲಂ ಮಾಡಿದಾಗ ನಕ್ಕಿದ್ದರು. ಆದರೆ ನನ್ನ ಸಿನಿಮಾ ಸಿಲ್ವರ್ ಜ್ಯುಬಿಲಿ ಕಂಡಿವೆ. ನಾಳೆ 12 ಘಂಟೆಗೆ ನಾಮಪತ್ರ ಸಲ್ಲಿಸಲಿದ್ದೇನೆ. ಮೋದಿ, ಅಮಿತ್ ಶಾ, ಯಡಿಯೂರಪ್ಪ, ಸದಾನಂದ ಗೌಡರ ಕನಸು ನನಸು ಮಾಡುತ್ತೇನೆ ಎಂದು ಹೇಳಿದರು.
ಜನರಿಗೆ ಗೊತ್ತಿರುವ ವ್ಯಕ್ತಿಯಾಗಿರುವ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ಪ್ರತಿಕ್ರಿಯಿಸಿದ್ದಾರೆ.
ಶೋಭಾ ಕರಂದ್ಲಾಜೆಯವರಿಗೆ ಯಶವಂತಪುರ ಕ್ಷೇತ್ರದ ಟಿಕೆಟ್ ಸಿಗಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಬಿಜೆಪಿ ಹೈಕಮಾಂಡ್ ಸಂಸದರ ಪೈಕಿ ಬಿಎಸ್ ಯಡಿಯೂರಪ್ಪ ಮತ್ತು ಶ್ರೀರಾಮುಲು ಅವರಿಗೆ ಮಾತ್ರ ಸ್ಪರ್ಧಿಸಲು ಅನುಮತಿ ನೀಡಿತ್ತು. ಹೀಗಾಗಿ ಬಿಜೆಪಿ ಯಶವಂತಪುರಕ್ಕೆ ಸೂಕ್ತ ಅಭ್ಯರ್ಥಿಯನ್ನು ಹುಡುಕುತಿತ್ತು. ಮೂರು ಪಟ್ಟಿ ಬಿಡುಗಡೆಯಾದಗಲೂ ಯಶವಂತಪುರದ ಅಭ್ಯರ್ಥಿಯನ್ನು ಬಿಜೆಪಿ ಪ್ರಕಟಿಸಿರಲಿಲ್ಲ. ಆದರೆ ಇಂದು ಪ್ರಕಟವಾದ ನಾಲ್ಕನೇಯ ಪಟ್ಟಿಯಲ್ಲಿ ಜಗ್ಗೇಶ್ ಅವರಿಗೆ ಟಿಕೆಟ್ ನೀಡಿ ಕಣಕ್ಕೆ ಇಳಿಸಿದೆ.