ಬೆಂಗಳೂರು: ಏಳೆಂಟು ತಿಂಗಳಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿರೋ ಸಂದರ್ಭದಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರಿಗೆ ಇಂದು ನಿರ್ಣಾಯಕ ದಿನ.
ಡಾ. ಶಿವರಾಮ ಕಾರಂತ ಬಡಾವಣೆಗೆ ಸೇರಿದ್ದ ಭೂಮಿಯನ್ನು ಡಿನೋಟಿಫೈ ಮಾಡಿದ್ದ ಹಗರಣ ಸಂಬಂಧ ಇಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಲಿದೆ. ನಿನ್ನೆಯೇ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ತೀರ್ಪನ್ನು ಬರೆಯಲು ಆರಂಭಿಸಿದ್ದರು. ಆದ್ರೆ ಸಮಯದ ಕೊರತೆ ಹಿನ್ನೆಲೆಯಲ್ಲಿ ಇವತ್ತಿಗೆ ಮುಂದೂಡಿದ್ದರು.
ತಮ್ಮ ವಿರುದ್ಧ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಕೋರಿ ಬಿಎಸ್ವೈ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಏಕಸದಸ್ಯ ಪೀಠ ಆದೇಶ ನೀಡಲಿದೆ. ಸಿಎಂ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಬಿಎಸ್ವೈ 257 ಎಕರೆ ಭೂಮಿಯನ್ನು ಡಿನೋಟಿಫೈ ಮಾಡಿದ್ದರು ಮತ್ತು ಭೂ ಮಾಲೀಕರಿಂದ ಅಪಾರ ಹಣ ಪಡೆದಿದ್ದಾರೆ ಅಂತಾ ಎಸಿಬಿ ವಾದಿಸಿತ್ತು.
ಅಲ್ಲದೇ ತನಿಖೆ ವೇಳೆ ಯಡಿಯೂರಪ್ಪ ವಿರುದ್ಧ ಮತ್ತಷ್ಟು ಸಾಕ್ಷ್ಯ ಲಭ್ಯವಾಗಿದೆ ಅಂತಾನೂ ಹೇಳಿತ್ತು. ಒಂದು ವೇಳೆ ತನಿಖೆ ಮುಂದುವರಿಸಬಹುದು ಎಂದು ಆದೇಶ ಬಂದರೆ ಆಗ ಬಿಎಸ್ವೈಗೆ ಬಂಧನದ ಭೀತಿ ಎದುರಾಗಲಿದೆ. ಇತ್ತ ಕೇಸ್ ರದ್ದು ಮಾಡಿದ್ರೆ ಆಗ ಎಸಿಬಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸೋ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿಯೇ ಗುರುವಾರ ರಾತ್ರಿ ಎಸಿಬಿ ಅಧಿಕಾರಿಗಳು ತುರ್ತುಸಭೆ ನಡೆಸಿದ್ದರು.