ಕಲಬುರಗಿ: ಬಾವಿ ಸ್ವಚ್ಛಗೊಳಿಸಲು ಹೋದ ಮೂವರು ಬಾವಿಯೊಳಗೇ ಬಿದ್ದು ಸಮಾಧಿಯಾದ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಕವಲಗಾ ಕೆ ಗ್ರಾಮದ ಬಳಿ ನಡೆದಿದೆ.
ತಂದೆ ಚನ್ನಣ್ಣಗೌಡ (60) ಮಗ ಮಲ್ಲಣಗೌಡ (20) ಗ್ರಾಮಸ್ಥ ಮೆಹಬೂಬ್ ಮೃತ ದುರ್ದೈವಿಗಳು. ಕವಲಗಾ ಗ್ರಾಮದ ದೇವಸ್ಥಾನದ ಮುಂಭಾಗದಲ್ಲಿನ ಬಾವಿಯ ನೀರು ಇಡೀ ಗ್ರಾಮಕ್ಕೆ ಜಲ ಮೂಲವಾಗಿತ್ತು. ಆದ್ರೆ ಇತ್ತಿಚೆಗೆ ಬಾವಿ ಬತ್ತಿ ಹೋಗಿದ್ದ ಕಾರಣ ಸ್ವಚ್ಛಗೊಳಿಸಲು ಮಲ್ಲಣಗೌಡ ಇಳಿದಿದ್ದರು.
50 ಅಡಿಗೂ ಅಧಿಕ ಆಳದ ಜೊತೆ ತುಂಬಾ ಇಕ್ಕಟ್ಟಾದ ಬಾವಿಗೆ ಇಳಿದ ಕಾರಣ ಒಳಗಡೆಯಿಂದ ಯಾವುದೇ ಸುಳಿವು ಕಾಣಲಿಲ್ಲ. ಹೀಗಾಗಿ ಮಗನನ್ನು ರಕ್ಷಿಸಲು ಚನ್ನಣ್ಣಗೌಡ ಬಾವಿಗೆ ಇಳಿದಿದ್ದಾರೆ. ಇವರಿಬ್ಬರೂ ಪತ್ತೆಯಾಗದ ಕಾರಣ ಮೆಹಬೂಬ್ ಅವರು ಕಾಪಾಡಲು ಇಳಿದಿದ್ದಾರೆ. ಆದರೆ ಆಮ್ಲಜನಕದ ಕೊರತೆಯಿಂದಾಗಿ ಮೂವರೂ ಬಾವಿಯೊಳಗೆ ಸಮಾಧಿಯಾಗಿದ್ದಾರೆ.
ಸುದ್ದಿ ತಿಳಿದು ಫರಹತಾಬಾದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳದವರು ಗ್ರಾಮಕ್ಕೆ ಆಗಮಿಸಿದ್ದು, ಶವ ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.