ಮಂಡ್ಯ: ತಿಥಿ ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದ ಯುವ ನಟ ಅಭಿಷೇಕ್ ನವೆಂಬರ್ 14ರಂದು ಗೃಹಸ್ಥಾಶ್ರಮಕ್ಕೆ ಕಾಲಿರಿಸಲಿದ್ದಾರೆ.
ನವೆಂಬರ್ 14 ಮತ್ತು 15ರಂದು ಮದುವೆ ಕಾರ್ಯಕ್ರಮಗಳು ನಡೆಯಲಿವೆ. ಮೂಲತಃ ಮಂಡ್ಯ ಮೂಲದ ಹುಲಿಕೆರೆ ಕೊಪ್ಪಲು ಗ್ರಾಮದ ಅಭಿಷೇಕ್, ತಮ್ಮ ಅಕ್ಕನ ಮಗಳು ಹೊಂಬಾಳೆ ಎಂಬಾಕೆಯನ್ನು ವರಿಸಲಿದ್ದಾರೆ. ಮಂಡ್ಯದ ಆಂಜನೇಯ ಸ್ವಾಮಿ ದೇವಾಲಯದ ಕಲ್ಯಾಣಮಂಟಪದಲ್ಲಿ ಅಭಿಷೇಕ್ ಮದುವೆ ನಡೆಯಲಿದೆ.
ಸುಂದರ ಸಾಮಾಜಿಕ ಹಾಗೂ ಕಲಾತ್ಮಕ ಸಿನಿಮಾ `ತಿಥಿ’ ಮೂಲಕ ಅಭಿಷೇಕ್ ತಮ್ಮ ಸಿನಿ ಜೀವನವನ್ನು ಆರಂಭಿಸಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆಯನ್ನು ಪಡೆದುಕೊಳ್ಳುವುದರ ಜೊತೆಗೆ ರಾಷ್ಟ್ರ ಪ್ರಶಸ್ತಿಯನ್ನು ಸಹ ಪಡೆದುಕೊಂಡಿತ್ತು. ಅಭಿಷೇಕ್ ತಿಥಿ ಸಿನಿಮಾದ ನಂತರ ತರ್ಲೆ ವಿಲೇಜ್, ಏನ್ ನಿನ್ನ ಪ್ರಾಬ್ಲಂ ಮತ್ತು ಹಳ್ಳಿ ಪಂಚಾಯ್ತಿ ಚಿತ್ರಗಳಲ್ಲಿ ನಟಿಸಿದ್ದಾರೆ.