ನವದೆಹಲಿ: ಇದೊಂದು ನಿರೀಕ್ಷಿತ ಗೆಲುವಾಗಿದೆ. ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಆದಿಕಾರಕ್ಕೆ ಬರುತ್ತೆ ಅಂತ ನಮಗೆ ಮೊದಲೇ ತಿಳಿದಿತ್ತು. ಹೀಗಾಗಿ ಇದೊಂದು ಸಮಾಧಾನಕರವಾದ ಗೆಲುವಾಗಿದೆ ಅಂತ ಕೇಂದ್ರ ಕಾನೂನು ಸಚಿವ ಡಿವಿ ಸದಾನಂದ ಗೌಡ ತಿಳಿಸಿದ್ದಾರೆ.
ಗುಜರಾತ್ ಹಾಗೂ ಹಿಮಾಚಲಪ್ರದೇಶದ ಚುನಾವಣಾ ಫಲಿತಾಂಶದ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಕಳೆದ 3 ವರ್ಷದಲ್ಲಿ ಗುಜರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯ ವೈಖರಿ ಹಾಗೂ ಗುಜರಾತಿನಲ್ಲಿ 13 ವರ್ಷ ಅವರು ನಡೆಸಿದ ಆಡಳಿತದಿಂದ ನಮಗೆ ಇಂದು ಈ ಗೆಲುವು ಲಭಿಸಿದೆ. ಅಲ್ಲದೇ ಈ ಗೆಲುವು ಇಡೀ ದೇಶದಲ್ಲೇ ಬರಬೇಕೆಂಬುದು ಜನ ಮನಸ್ಸಿನ ಭಾವನೆ ಅಂತ ಅವರು ಹೇಳಿದ್ರು.
ಇದೊಂದು ಸಮಾಧಾನಕರವಾದ ಗೆಲುವಾಗಿದ್ದು, ಪಾಟೀದಾರ್ ಸಮುದಾಯವನ್ನು ಒಡೆದು ಆಳುವ ನೀತಿ ಇರಬಹುದು ಅಥವಾ ಹಿಂದುಳಿದ ಅಥವಾ ಬೇರೆ ಸಮುದಾಯದ ನಾಯಕರನ್ನು ಪಕ್ಷಕ್ಕೆ ಸೇರಿಸಕೊಳ್ಳುವ ಮೂಲಕ ಒಂದು ರೀತಿಯಲ್ಲಿ ಕಾಂಗ್ರೆಸ್ ಪಕ್ಷ ಹಲವು ತಂತ್ರಗಾರಿಕೆಗಳನ್ನು ರೂಪಿಸಿತ್ತು. ಆದ್ರೆ ಇವೆಲ್ಲದರ ಮಧ್ಯೆ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ ಅಂದ್ರೆ ಇದೊಂದು ಅಸಾಧಾರಣ ಗೆಲುವು ಅಂತಾನೇ ಹೇಳಬಹುದು ಅಂದ್ರು.
ಭ್ರಷ್ಟ ಅಧಿಕಾರಿಗಳಿಗೆ ಮತ್ತೆ ಅವಕಾಶ ಕೊಡಬಾರದೆಂದು ಭಾರತೀಯ ಜನತಾ ಪಕ್ಷದ ಸ್ಪಷ್ಟ ವಿಚಾರವಾಗಿದೆ. ಆರೋಪಗಳು, ಪ್ರತ್ಯಾರೋಪಗಳು ರಾಜಕೀಯದಲ್ಲಿ ಸಾಮಾನ್ಯ. ಆ ಆರೋಪಗಳು ಸಾಬೀತಾಗಿಲ್ಲ ಅಂತ ಅದನ್ನು ಮತ್ತೆ ಮತ್ತೆ ಮುಂದುವರೆಸುವುದರಲ್ಲಿ ನೈತಿಕತೆ ಇಲ್ಲ ಅಂತ ಡಿವಿಎಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು.