ಮಂಗಳೂರು: ಶ್ರೀರಾಮ ಚಂದ್ರನ ಅಸ್ತಿತ್ವಕ್ಕೆ ಸರಿಯಾದ ದಾಖಲೆ ಇಲ್ಲ. ಅದೊಂದು ಅಪ್ಪಟ ಸುಳ್ಳು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿಎಸ್ ದ್ವಾರಕನಾಥ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮಂಗಳೂರಿನ ಪುರಭವನದಲ್ಲಿ ಮಂಗಳವಾರ ನಡೆದ ಬಾಬ್ರಿ ಮಸೀದಿ ಧ್ವಂಸ ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ದ್ವಾರಕನಾಥ್ ನಾಲಗೆ ಹರಿಬಿಟ್ಟಿದ್ದು, ಶ್ರೀರಾಮ ಚಂದ್ರನ ಅಸ್ತಿತ್ವಕ್ಕೆ ಯಾವುದೇ ದಾಖಲೆಗಳಿಲ್ಲ. ರಾಮನ ಕುರಿತು ಸರಿಯಾದ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ.
ನಮ್ಮ ತಾತನ ಹೆಸರು ಹೇಳಿ ಎಂದರೆ ಹೇಳಬಹುದು. ಅವರ ಅಪ್ಪನ ಹೆಸರು ಹೇಳಿ ಅಂದರೆ ಆಗುತ್ತಾ. ಆದರೆ 9 ಲಕ್ಷ ವರ್ಷಗಳ ಹಿಂದೆ ಇದ್ದ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ ಎಂದರೆ ಇದಕ್ಕೆ ಏನು ಹೇಳಬೇಕು ಗೊತ್ತಿಲ್ಲ ಎಂದು ಹೇಳಿದರು.
ನಮಗೆ ಜ್ಞಾನ ಬಂದ ನಂತರ ದಾಖಲಾತಿಗಳ ಪ್ರಕಾರ ನಾನು ಜಗತ್ತಿನಲ್ಲಿ ಮೂರು ವ್ಯಕ್ತಿಗಳನ್ನು ಗುರುತಿಸಬಹುದು. ಮೊದಲನೆಯದ್ದಾಗಿ ಬುದ್ದ. ಇವರು ಸುಮಾರು 2600 ವರ್ಷಗಳ ಹಿಂದೆ ಇದ್ದರು ಎಂಬುದಕ್ಕೆ ದಾಖಲಾತಿಗಳಿವೆ. ಎರಡನೆಯದಾಗಿ ಜೀಸಸ್. ಇವರು ಸುಮಾರು 1600 ವರ್ಷಗಳ ಹಿಂದೆ ಇದ್ದರು, ಇದಕ್ಕೂ ಪುರಾವೆಗಳಿವೆ. ಇನ್ನು ಮೂರನೆಯದಾಗಿ ಪೈಗಂಬರ್. ಇವರು ಸುಮಾರು 600 ವರ್ಷಗಳ ಹಿಂದೆ ಇದ್ದರು ಎಂಬುವುದಕ್ಕೆ ದಾಖಲಾತಿಗಳಿವೆ.
ಇವುಗಳನ್ನು ಹೊರತುಪಡಿಸಿದರೆ ಇನ್ನು ಯಾವ ದಾಖಲಾತಿಗಳೂ ವಿಜ್ಞಾನದ ಕಣ್ಣಿಗೆ ಸಿಗುತ್ತಿಲ್ಲ. ಹಿಂದಿನಿಂದಲೂ ಸುಳ್ಳು ಹೇಳಿಕೊಂಡೇ ಸತ್ಯಾವನ್ನಾಗಿ ಬಿಂಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.