ಬೆಳಗಾವಿ: ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು, ಅದೃಷ್ಟವಷಾತ್ ಚಿತ್ರತಂಡ ಅಪಾಯದಿಂದ ಪಾರಾಗಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಾಮತೀರ್ಥ ಎಂಬಲ್ಲಿ ದಿ ವಿಲನ್ ಚಿತ್ರತಂಡ ಕೆಲ ದಿನಗಳಿಂದ ಚಿತ್ರೀಕರಣಕ್ಕಾಗಿ ಬೀಡು ಬಿಟ್ಟಿತ್ತು. ಮಂಗಳವಾರ ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಏಕಾಏಕಿ ಬಿರುಗಾಳಿ ಎದ್ದಿತ್ತು. ಸುಮಾರು 15 ರಿಂದ 20 ನಿಮಿಷಗಳ ಕಾಲ ಚಿತ್ರತಂಡ ಬಿರುಗಾಳಿ ರಭಸಕ್ಕೆ ನಲುಗಿ ಹೋಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಶಿವಣ್ಣ- ಸುದೀಪ್ ಕಾಂಬಿನೇಷನ್ನ ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರಕ್ಕಾಗಿ ಕಿಚ್ಚ ಸುದೀಪ್ ಅಭಿನಯದ ಸ್ಟಂಟ್ ಭಾಗವನ್ನ ಚಿತ್ರೀಕರಿಸಲಾಗುತ್ತಿತ್ತು. ಬಿರುಗಾಳಿ ಬೀಸಿದಾಗ ಅಭಿಮಾನಿಗಳು ರಕ್ಷಣೆಗೆ ಮುಂದಾದ್ರು. ಈ ವೇಳೆ ಗಾಳಿಯಲ್ಲಿ ತೂರಿ ಬಂದ ಕಲ್ಲುಗಳಿಂದ ಕೆಲವರಿಗೆ ಸಣ್ಣ ಗಾಯಗಳಾಗಿವೆ ಎಂದು ಹೇಳಲಾಗಿದೆ.
ಬಿರುಗಾಳಿಯಿಂದ ಚಿತ್ರದ ಸೆಟ್ ಗೆ ಹಾನಿಯುಂಟಾಗಿದೆ. ಶೂಟಿಂಗ್ ಗೆ ಬಳಸಲಾಗಿದ್ದ ಅನೇಕ ಉಪಕರಣಗಳು ಹಾಗೂ ವಸ್ತುಗಳು ಬಿರುಗಾಳಿಯಲ್ಲಿ ಹಾರಿ ಹೋಗಿವೆ. ಆದರೂ ಇಂದು ಪುನಃ ಅದೇ ಜಾಗದಲ್ಲಿ ಚಿತ್ರತಂಡ ಶೂಟಿಂಗ್ ಮಾಡಲಿದೆ.