ಬೆಂಗಳೂರು: 2018ರ ಕರ್ನಾಟಕ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ.
ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್ಗೆ ಈ ಭಾರಿ ಕೂಡ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೊಡಿಸೋದಾಗಿ ಭರವಸೆ ನೀಡಿದ್ದ ಆರ್. ಅಶೋಕ್ ಜಯನಗರ ನಿವಾಸದ ಬಳಿ ರಮೇಶ್ ಬೆಂಬಲಿಗರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ರು.
ಅಶೋಕ್ ನಂಬಿಕೆದ್ರೋಹಿ ಎಂದು ಘೋಷಣೆ ಕೂಗಿದ್ರು. ಒಂದುವೇಳೆ ಎನ್.ಆರ್.ರಮೇಶ್ಗೆ ಟಿಕೆಟ್ ನೀಡದೇ ಹೋದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪದ್ಮನಾಭ ನಗರದಲ್ಲಿ ನಿಲ್ಲಿಸಿ ಗೆಲ್ಲಿಸುತ್ತೇವೆ ಅಂತ ಆರ್.ಅಶೋಕ್ ಗೆ ಸವಾಲ್ ಹಾಕಿದ್ರು. ಚಿಕ್ಕಪೇಟೆಯಿಂದ ಉದ್ಯಮಿ ಗರುಡಾಚಾರ್ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿಯ 72 ಮಂದಿ ಅಧಿಕೃತ ಅಭ್ಯರ್ಥಿಗಳ ಪಟ್ಟಿ ರಿಲೀಸ್: ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧೆ?
ಹಾವೇರಿ ಜಿಲ್ಲೆ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರದಲ್ಲೂ ಭಿನ್ನಮತ ಸ್ಪೋಟಗೊಂಡಿದೆ. ಹಾಲಿ ಶಾಸಕ ಬಸವರಾಜ್ ಬೊಮ್ಮಾಯಿ ಹೆಸರು ಘೋಷಣೆ ಆಗ್ತಿದ್ದಂತೆ ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವದಾಗಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಯಡಿಯೂರಪ್ಪ ಶಿಷ್ಯ ಬಸವರಾಜ್ ಬೊಮ್ಮಾಯಿ ಸೋಲಿಸಲು ಕೆ.ಎಸ್.ಈಶ್ವರಪ್ಪ ಶಿಷ್ಯ ಸೋಮಣ್ಣ ಬೇವಿನಮರದ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೊಮ್ಮಾಯಿ ಟಾಂಗ್ ನೀಡಲಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.