ಯಾದಗಿರಿ: ದೇವಸ್ಥಾನದ ಪೂಜಾರಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಮಹಲರೋಜಾ ಗ್ರಾಮದಲ್ಲಿ ನಡೆದಿದೆ.
55 ವರ್ಷದ ಹನುಮಂತರಾಯ ನಾಯಕೋಡಿ ಕೊಲೆಯಾದವರು. ಇವರು ಯಮನೂರೇಶ್ವರ ದೇವಾಲಯದ ಪೂಜಾರಿಯಾಗಿದ್ದರು. ಅದೇ ಗ್ರಾಮದ ನಿಂಗಪ್ಪ ಎಂಬವನಿಂದ ಕೊಲೆ ನಡೆದಿದೆ. ಸದ್ಯ ಆರೋಪಿ ನಿಂಗಪ್ಪ ಪರಾರಿಯಾಗಿದ್ದಾನೆ.
ಹನುಮಂತರಾಯ ಅವರು ಬಹಿರ್ದೆಸೆಗೆ ಹೋಗಿ ವಾಪಸ್ ಬರುತ್ತಿದ್ದಾಗ ಮಚ್ಚಿನಿಂದ ಹಲ್ಲೆ ನಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಹನುಮಂತರಾಯ ಅವರನ್ನ ಚಿಕಿತ್ಸೆಗೆ ಕಲಬುರಗಿಗೆ ರವಾನೆ ಮಾಡಲಾಗ್ತಿತ್ತು. ಆದ್ರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಜೇವರ್ಗಿ ಬಳಿ ಸಾವನ್ನಪ್ಪಿದ್ದಾರೆ.
ಕೊಲೆ ಹಿನ್ನೆಲೆಯಲ್ಲಿ ಕೋಲಿ ಸಮಾಜದವರು ಬಸವೇಶ್ವರ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದು, ಆರೋಪಿಯ ಬಂಧನಕ್ಕೆ ಆಗ್ರಹಿಸಿದ್ದಾರೆ.
ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.