ರಾಯಚೂರು: ಹೈದ್ರಾಬಾದ್ ಕರ್ನಾಟಕದಲ್ಲಿ ಬಿಸಿಲಿನ ಝಳ ಜೋರಾಗಿದೆ. ಗರ್ಭಿಣಿಯರು ಬಿಸಿಲ ತಾಪಕ್ಕೆ ಹಲವಾರು ಸಮಸ್ಯೆಗಳಿಗೆ ಒಳಗಾದ್ರೆ, ಹೆರಿಗೆಯಾದ ಬಳಿಕ ಮಕ್ಕಳು ಮಾರಣಾಂತಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಈಗಲೇ ಇಷ್ಟೊಂದು ತೊಂದರೆಗೆ ಒಳಗಾಗಿದ್ರೆ, ಮುಂದಿನ ತಿಂಗಳು ಕಾದಿದೆ ಅಪಾಯ ಅಂತಿದ್ದಾರೆ ಹವಾಮಾನ ತಜ್ಞರು.
ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗ್ತಿದ್ದು, ರಾಯಚೂರು, ಬಳ್ಳಾರಿ, ಕಲಬುರಗಿ, ಯಾದಗಿರಿಯಲ್ಲಿ ನವಜಾತ ಶಿಶುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ರಾಯಚೂರು ಜಿಲ್ಲೆಯಲ್ಲಿ ಶಿಶುಗಳ ತೂಕ ಕಡಿಮೆಯಾಗಿ ಆಸ್ಪತ್ರೆಗೆ ದಾಖಲಾಗುವ ಸಂಖ್ಯೆ ಜಾಸ್ತಿಯಾಗ್ತಿದ್ದು, ಜ್ವರ, ಕಾಮಾಲೆ, ಕಡಿಮೆ ಮೂತ್ರ, ನಿರ್ಜಲೀಕರಣ, ಕಿಡ್ನಿ ವೈಫಲ್ಯ ಸಮಸ್ಯೆ ಹೆಚ್ಚಾಗ್ತಿದೆ.
ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನಕ್ಕೆ ಸಿಲುಕಿ 800ಕ್ಕೂ ಹೆಚ್ಚು ಶಿಶುಗಳು ಅಪಾಯದಲ್ಲಿ. ನಿರ್ಜಲೀಕರಣದಿಂದ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಜ್ವರ ಕಾಣಿಸಿಕೊಳ್ಳುತ್ತಿದ್ದು, ಕೆಲವು ಮಕ್ಕಳ ಮೂತ್ರಪಿಂಡ ವೈಫಲ್ಯವಾಗಿದೆ. ರಾಯಚೂರು ಕೃಷಿ ವಿವಿಯ ಹವಾಮಾನ ತಜ್ಞರ ಮಾಹಿತಿ ಪ್ರಕಾರ ಮೇ ತಿಂಗಳಲ್ಲಿ ಬಿಸಿಲಿನ ತಾಪ 45 ಡಿಗ್ರಿ ಸೆಲ್ಸಿಯಸ್ ತಲುಪಲಿದ್ದು, ಮಕ್ಕಳು, ತಾಯಂದಿರು ಎಚ್ಚರಿಕೆ ವಹಿಸಬೇಕಿದೆ.