ಹೈದರಾಬಾದ್: ವ್ಯಕ್ತಿಯೊಬ್ಬ ತನ್ನ ಕುಟುಂಬದ ಐವರನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿರೋ ಘಟನೆ ತೆಲಂಗಾಣದ ಖಮ್ಮಾಮ್ ಜಿಲ್ಲೆಯಲ್ಲಿ ನಡೆದಿದೆ.
32 ವರ್ಷದ ಎಸ್ ಸಲೀಮ್ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಸಲೀಮ್ ತನ್ನ ಹೆಂಡತಿ, ಪೋಷಕರು ಹಾಗೂ ಇಬ್ಬರು ಮಕ್ಕಳನ್ನು ಕಾಲುವೆಯೊಂದಕ್ಕೆ ತಳ್ಳಿ ಕೊಲೆ ಮಾಡಿದ್ದು, ನಂತರ ತಾನೂ ಕೂಡ ಅದೇ ಕಾಲುವೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಕ್ಕಳಿಬ್ಬರೂ 10 ವರ್ಷಕ್ಕಿಂತ ಕಡಿಮೆ ವಯುಸ್ಸಿನವರು.
ಈ ಘಟನೆ ಕಳೆದ ರಾತ್ರಿ ಜಿಲ್ಲಾಚೆರುವು ಎಂಬ ಗ್ರಾಮದಲ್ಲಿ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಸಲೀಮ್ ಮನೆಯಲ್ಲಿ ಡೆತ್ನೋಟ್ ಪತ್ತೆಯಾಗಿದ್ದು, ಕೌಟುಂಬಿಕ ಕಲಹದ ಬಗ್ಗೆ ಸಲೀಮ್ ಬರೆದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಸಲೀಮ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಕುಟುಂಬಸ್ಥರನ್ನು ಮೊದಲು ಕೊಂದು ನಂತರ ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆಂದು ಗೊತ್ತಾಗಿದೆ ಎಂದು ಖಮ್ಮಾಮ್ನ ಪೊಲೀಸ್ ವರಿಷ್ಠಾಧಿಕಾರಿ ತಫ್ಸೀರ್ ಇಕ್ಬಾಲ್ ಹೇಳಿದ್ದಾರೆ.
ಎಲ್ಲಾ ಆರು ಶವಗಳನ್ನ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಡೆತ್ನೋಟನ್ನು ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಲಯಕ್ಕೆ ಕಳಿಸಲಾಗಿದೆ ಎಂದು ವರದಿಯಾಗಿದೆ.