ಚೆನ್ನೈ: ಜಾಹಿರಾತು ಫಲಕಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ 30 ವರ್ಷದ ಟೆಕ್ಕಿಯೊಬ್ಬರು ಸಾವನ್ನಪ್ಪಿದ ಘಟನೆ ಕಳೆದ ಶುಕ್ರವಾರ ತಮಿಳುನಾಡಿನಲ್ಲಿ ನಡೆದಿದೆ. ಈ ಹಿನ್ನೆಲೆಯಲ್ಲಿ ಹೂ ಕಿಲ್ಡ್ ರಘು ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಎದ್ದಿದ್ದು, ಇದೀಗ ವೈರಲ್ ಆಗಿದೆ.
ಮದುವೆಗೆ ಹುಡುಗಿಯನ್ನ ನೋಡಲು ಅಮೆರಿಕದಿಂದ ತಮಿಳುನಾಡಿನ ಕೊಯಮತ್ತೂರಿನ ತನ್ನ ಮನೆಗೆ ಹಿಂದಿರುಗಿದ್ದ 30 ವರ್ಷದ ಸಾಫ್ಟ್ವೇರ್ ಎಂಜಿನಿಯರ್ ರಘುಪತಿ ಕಂದಸ್ವಾಮಿ ಮೃತ ದುರ್ದೈವಿ. ಎಂಜಿಆರ್ ಶತಮಾನೋತ್ಸವ ಆಚರಣೆಗಾಗಿ ಎಐಎಡಿಎಂಕೆ ಪಕ್ಷದವರು ದೊಡ್ಡದಾದ ಜಾಹಿರಾತು ಫಲಕವನ್ನು ಹಾಕಿದ್ದರು. ಇದಕ್ಕಾಗಿ ಮರದ ಕೋಲುಗಳಿಂದ ಕಮಾನಿನಂತೆ ನಿರ್ಮಾಣ ಮಾಡಲಾಗಿತ್ತು. ಇದಕ್ಕೆ ಗುದ್ದಿದ ಪರಿಣಾಮ ರಘು ಬೈಕಿನಿಂದ ಕೆಳಗೆ ಬಿದ್ದಿದ್ದು, ಅವರ ಮೇಲೆ ಟ್ರಕ್ ಹರಿದು ಸಾವನ್ನಪ್ಪಿದ್ದರು.
ವಾರಾಂತ್ಯದ ವೇಳೆಗೆ ರಘು ಅಮೆರಿಕಗೆ ಹಿಂದಿರುಗಬೇಕಿತ್ತು. ಘಟನೆ ನಡೆದ ವೇಳೆ ರಘು ಹೆಲ್ಮೆಟ್ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ರಘು ತನ್ನ ಬೈಕ್ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ ಅಲ್ಲಿಂದ ಬಸ್ನಲ್ಲಿ ದೇವಸ್ಥಾನಕ್ಕೆ ಹೋಗಬೇಕೆಂದಿದ್ದರು ಎಂದು ವರದಿಯಾಗಿದೆ.
ಅಪಘಾತ ನಡೆದ ಕೆಲವು ಗಂಟೆಗಳ ನಂತರ ಯಾರೋ ಒಬ್ಬರು ಘಟನಾ ಸ್ಥಳದಲ್ಲಿ “ಹೂ ಕಿಲ್ಡ್ ರಘು” ಎಂದು ಬಿಳಿ ಪೇಂಟ್ನಿಂದ ಬರೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ರಘು ಅವರ ಬೈಕ್ ಗುದ್ದಿದ ಮರದ ಕಮಾನು ರಸ್ತೆಯ ಎರಡೂ ಬದಿಯಲ್ಲಿ ಸ್ಥಳವನ್ನ ಆವರಿಸಿತ್ತು. ಅದರ ಒಂದು ಭಾಗಕ್ಕೆ ಬೈಕ್ ಗುದ್ದಿದ್ದು, ರಘು ಬೈಕಿನಿಂದ ಕೆಳಗೆ ಬಿದ್ದಿದ್ದಾರೆ. ಕೊಯಮತ್ತೂರಿನ ಅವಿನಾಶಿ ರಸ್ತೆಯಲ್ಲಿ ಹಾಕಲಾಗಿದ್ದ ಈ ಜಾಹಿರಾತು ಫಲಕ ರಸ್ತೆಯ 30% ಜಾಗವನ್ನ ಆವರಿಸಿತ್ತು ಎಂದು ಹೋರಾಟಗಾರರು ಆರೋಪಿಸಿದ್ದಾರೆ.
ಶನಿವಾರದಂದು ಕೊಯಮತ್ತೂರು ಕಾರ್ಪೊರೇಷನ್ನ ಕಮಿಷಕನರ್ ಎಲ್ಲಾ ಫಲಕಗಳನ್ನ ತೆಗೆದುಹಾಕುವಂತೆ ಸೂಚಿಸಿದ್ದಾರೆ. ಫಲಕಗಳನ್ನ ಹಾಕಲು ಯಾವುದೇ ಅನುಮತಿ ಇರಲಿಲ್ಲ. ಇದು ಅಕ್ರಮ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಎಐಎಡಿಎಂಕೆ ಕಾರ್ಯಕರ್ತರು ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಿಎಂ ಎಂಜಿ ರಾಮಚಂದ್ರನ್ ಅವರ 100ನೇ ಜನ್ಮ ಶತಮಾನೋತ್ಸವವನ್ನು ಆಚರಿಸುತ್ತಿದ್ದಾರೆ.